ಕೊಪ್ಪಳ: ಗವಿನಾಡು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಿರ್ಚಿ ಹಬ್ಬ ಆರಂಭವಾಗಿದೆ. ಜಾತ್ರೆಯ ಹಿನ್ನೆಲೆ ಮಾಹಾದಾಸೋಹಕ್ಕೆ ಹೆಸರುವಾಸಿಯಾದ ಗವಿ ಮಠದಲ್ಲಿ ಮಿರ್ಚಿ ಮಾಡುವ ಕೆಲಸದಲ್ಲಿ ಬಾಣಸಿಗರು ನಿರತರಾಗಿದ್ದಾರೆ.
ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರುವಾಸಿಯಾದ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಜಾತ್ರೆಯ ಮಾಹಾ ದಾಸೋಹ ಮತ್ತೊಂದು ವೈಶಿಷ್ಟ್ಯವಾಗಿದ್ದು, 300ಕ್ಕೂ ಹೆಚ್ಚು ಬಾಣಸಿಗರು ಮಿರ್ಚಿ ಮಾಡ್ತಿದಾರೆ. ದಾಸೋಹಕ್ಕೆ ಬಂದ ಭಕ್ತರಿಗೆ ಕಳೆದ ಐದು ವರ್ಷದಿಂದ ಗವಿ ಮಠ ಮಿರ್ಚಿ ನೀಡ್ತಿದೆ. ಸುಮಾರು ಮೂರು ಲಕ್ಷ ಜನರು ಇಂದು ಗವಿ ಮಠದ ಜಾತ್ರೆಯಲ್ಲಿ ಖಡಕ್ ಮಿರ್ಚಿ ರುಚಿ ಸವಿಯಲಿದ್ದಾರೆ.
15 ಕ್ವಿಂಟಾಲ್ ಕಡಲೆ ಹಿಟ್ಟು, ಹತ್ತು ಬ್ಯಾರೆಲ್ ಒಳ್ಳೆ ಎಣ್ಣೆ ಹಾಗೂ 18 ಕ್ವಿಂಟಾಲ್ ಮೆಣಸಿಕಾಯಿ ಮಿರ್ಚಿ ದಾಸೋಹಕ್ಕೆ ಬಳಸಲಾಗುತ್ತಿದೆ. ಸಿಂಧನೂರಿನ ಗವಿ ಮಠದ ಭಕ್ತರು ಹಣ ಹಾಕಿ, ದಾಸೋಹಕ್ಕೆ ಬಂದ ಭಕ್ತರಿಗೆ ಮಿರ್ಚಿ ರುಚಿ ತೋರಿಸುತ್ತಿದ್ದಾರೆ.