ಮೈಸೂರು: ರಾತ್ರೋ ರಾತ್ರಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷವಾದ ಘಟನೆ ನಂಜನಗೂಡು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ, ಸೋಮವಾರ ಬೆಳೆಗ್ಗೆ ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ.
ಸುಚಿತ್ರಾ (ಹೆಸರು ಬದಲಾಯಿಸಲಾಗಿದೆ) ಮಾದಾಪುರ ಗ್ರಾಮದ ಮಣಿಕಂಠ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದ್ರೆ ಇವರಿಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಗಳ ಪ್ರೀತಿಯ ವಿಷಯ ತಿಳಿದ ಪೋಷಕರು ಬೇರೊಬ್ಬ ಹುಡುಗನ ಜೊತೆ ವಿವಾಹ ಮಾಡಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುಚಿತ್ರಾ ಮನೆ ಬಿಟ್ಟು, ಅದೇ ಗ್ರಾಮದ ತನ್ನ ಪ್ರಿಯಕರ ಮಣಿಕಂಠನ ಮನೆಯಲ್ಲಿ ಇಡೀ ರಾತ್ರಿ ಕಳೆದಿದ್ದಾಳೆ.
ಮಣಿಕಂಠನ ಮೇಲೆ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.