ಕೊಡಗು: ವಿಶೇಷ ಅನ್ನಭಾಗ್ಯ ಯೋಜನೆಯಡಿ ಕೊಡಗು ಪ್ರವಾಹ ಸಂತ್ರಸ್ತರಿಗೆ 50 ಸಾವಿರ ರೂ. ಮೌಲ್ಯದ ಆಹಾರ ಕಿಟ್ಟನ್ನು ಆಹಾರ ಮತ್ತು ನಾಗರಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಇಂದು ವಿತರಣೆ ಮಾಡಿದ್ದಾರೆ.
ಮಡಿಕೇರಿ ಆರ್ಎಂಸಿ ಯಾರ್ಡ್ನಲ್ಲಿ 150 ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿ ಬಳಿಕ ಮಾತನಾಡಿದ ಸಚಿವರು, ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸುಮಾರು 50 ಸಾವಿರ ರೂ. ಮೌಲ್ಯದ ಕಿಟ್ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಸದ್ಯ 50 ಸಾವಿರ ಆಹಾರದ ಕಿಟ್ ಗಳನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಣೆ ಮಾಡಲು ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ನೆರವಿನೊಂದಿಗೆ ಪ್ರತಿಯೊಂದು ಗ್ರಾಮ ಪಂಚಾಯ್ತಿಗೂ ವಿತರಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿರುವ ಎಲ್ಲಾ ಸಂತ್ರಸ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಯಾರನ್ನು ಹಿಂದೆ ಕಳುಹಿಸುವ ಪ್ರಶ್ನೆ ಇಲ್ಲ. ಅಲ್ಲದೇ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೀಮೆ ಎಣ್ಣೆ ವಿತರಣೆಗೂ ಕ್ರಮಕೈಗೊಂಡಿದ್ದಾಗಿ ತಿಳಿಸಿದರು.
ಸದ್ಯ 16 ಸಾವಿರ ಲೀಟರ್ ಸೀಮೆ ಎಣ್ಣೆ ಬೇಡಿಕೆ ಇದ್ದು, ಕೊಡಗಿಗೆ ಪೂರೈಕೆ ಮಾಡಿದ್ದೇವೆ. ನನ್ನ ವೈಯಕ್ತಿಕ ಹಣದಿಂದ ಸಂತ್ರಸ್ತರಿಗೆ 5 ಸಾವಿರ ಬೆಡ್ ಶೀಟ್ ಅಗತ್ಯ ವಸ್ತುಗಳನ್ನು ನೀಡಿದ್ದೇನೆ. ಈಗಾಗಲೇ ಕೆಲ ಪ್ರದೇಶಗಳಲ್ಲಿ ಮನೆ ಕಳೆದುಕೊಂಡ ಜನರಿಗೆ ವಸತಿ ಕಲ್ಪಿಸಲು 5 ಸ್ಥಳಗಳನ್ನು ಗುರುತಿಸಿದ್ದಾಗಿ ತಿಳಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಮಳೆಯಿಂದ ಬಿಪಿಎಲ್, ಎಪಿಎಲ್ ಕಾರ್ಡ್ ಕಳೆದುಕೊಂಡ ಮಂದಿಗೆ ನಕಲು ಚೀಟಿ ನೀಡುತ್ತೇವೆ. ಯಾರಿಗೂ ಸಮಸ್ಯೆ ಆಗಲು ಬಿಡುವುದಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬುಕ್, ಬ್ಯಾಗ್ ವಿತರಿಸಲಾಗುವುದು. ಅಲ್ಲದೇ ಆಹಾರ ಸಾಮಾಗ್ರಿ ದುರುಪಯೋಗವಾಗದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇಲ್ಲಿನ ಸಂತ್ರಸ್ತರಿಗೆ ತಾತ್ಕಾಲಿಕ ಮನೆ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆ. ಅಲ್ಲದೇ ಹೊಸ ಮನೆ ನಿರ್ಮಾಣ ಮಾಡಲು ಕನಿಷ್ಟ 6 ತಿಂಗಳು ಬೇಕು. ಈ ಕುರಿತು ಬಹುಬೇಗ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv