ಮಂಗಳೂರು: ಶಾಸಕರು ಹಾಗೂ ಸಚಿವರ ಮಕ್ಕಳು ಸಾಮಾನ್ಯವಾಗಿ ದೊಡ್ಡ ಸಂಬಳ ಗಳಿಸುವ ಡಾಕ್ಟರ್, ಎಂಜಿನಿಯರ್ ಗಳಾಗಲು ಬಯಸುತ್ತಾರೆ. ಆದರೆ ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಪುತ್ರಿ ಧಾರ್ಮಿಕ ಶಿಕ್ಷಣದತ್ತ ಮುಖ ಮಾಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಯು.ಟಿ ಖಾದರ್ ಹೇಳಿಕೊಂಡಿದ್ದ ಹರಕೆ.
ಎಂಟು ವರ್ಷಗಳ ಹಿಂದೆ ಖಾದರ್ ಕುಟುಂಬ ಮೆಕ್ಕಾ ಯಾತ್ರೆ ಕೈಗೊಂಡಿದ್ದಾಗ ಜನಜಂಗುಳಿಯಲ್ಲಿ ಹತ್ತು ವರ್ಷದ ಮಗಳು ನಸೀಮಾ ನಾಪತ್ತೆಯಾಗಿದ್ದಳು. ಕಾಬಾದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾಗ ಘಟನೆ ನಡೆದಿದ್ದರಿಂದ ಎಲ್ಲಿ ಹುಡುಕಿದರೂ, ಪುತ್ರಿ ಸಿಕ್ಕಿರಲಿಲ್ಲ. ಕೊನೆಗೆ ತನ್ನ ಮಗಳು ಸಿಕ್ಕರೆ ಧಾರ್ಮಿಕ ಶಿಕ್ಷಣ ಕಲಿಸುವುದಾಗಿ ಹರಕೆ ಹೇಳಿಕೊಂಡಿದ್ದರು.
- Advertisement 2
- Advertisement 3
ಅಂದು ರಾತ್ರಿಯೇ ಪಾಕಿಸ್ತಾನ ಮೂಲದ ಕುಟುಂಬದ ಜೊತೆಗಿದ್ದ ಪುತ್ರಿ ಅಚಾನಕ್ಕಾಗಿ ಪತ್ತೆಯಾಗಿದ್ದಳು. ಹರಕೆ ಹೇಳಿಕೊಂಡಂತೆ ಆಗ ಶಾಸಕರಾಗಿದ್ದ ಖಾದರ್ ಪುತ್ರಿಯನ್ನು ಕೇರಳದ ಕಾಸರಗೋಡಿನಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಸೇರಿಸಿದ್ದರು. ಅಲ್ಲದೆ ಖುರಾನ್ ಕಂಠಪಾಠ ಮಾಡಿಸಿದ್ದರು. ಧಾರ್ಮಿಕ ಶಿಕ್ಷಣ ಪಡೆಯುವ ಇವರು ಮುಂದೆ ಧರ್ಮ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
- Advertisement 4
ವಿಶೇಷ ಅಂದರೆ ಮಾಮೂಲಿ ಶಾಲೆ ಬಿಟ್ಟು ಧಾರ್ಮಿಕ ಶಿಕ್ಷಣಕ್ಕೆ ಸೇರಿದ್ದ ನಸೀಮಾ ಬಳಿಕ ಅದಕ್ಕೆ ಹೊಂದಿಕೊಂಡಿದ್ದಳು. ಈಗ ಧಾರ್ಮಿಕ ಶಿಕ್ಷಣದ ಜೊತೆ 9ನೇ ಕ್ಲಾಸ್ ಕಲಿಯುತ್ತಿರುವ ನಸೀಮಾ, ಈ ಬಾರಿ ದುಬೈನಲ್ಲಿ ನಡೆಯುವ ಖುರಾನ್ ಕಂಠಪಾಠ ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾಳೆ.
ಶೈಖಾ ಫಾತಿಮಾ ಬಿನ್ ಮುಬಾರಕ್ ಹೆಸರಿನ ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಅವಾರ್ಡ್ ಸ್ಪರ್ಧೆ ನ.4ರಿಂದ 16ರ ವರೆಗೆ ದುಬೈನಲ್ಲಿ ನಡೆಯಲಿದ್ದು, ಆರು ತಿಂಗಳ ವಿವಿಧ ಪ್ರಕ್ರಿಯೆಗಳ ಬಳಿಕ ವಿಶ್ವದ 63 ಸ್ಪರ್ಧಾಳುಗಳ ಜೊತೆಗೆ ಭಾರತದಿಂದ ನಸೀಮಾ ಅವರನ್ನು ಏಕೈಕ ಪ್ರತಿನಿಧಿಯಾಗಿ ಯುಎಇ ಸರಕಾರ ಆಯ್ಕೆ ಮಾಡಿದೆ. ಮಹಿಳೆಯರಿಗಾಗಿ ಇರುವ ಸ್ಪರ್ಧೆಯಲ್ಲಿ ಗೆದ್ದವರಿಗೆ 50 ಲಕ್ಷ ರೂ. ಬಹುಮಾನ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv