ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಮಕ್ಕಳ ಪರೀಕ್ಷಾ ಆತಂಕ ನಿವಾರಣೆಗಾಗಿ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದರೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚೆ ನಡೆಸಿ ಮಕ್ಕಳ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದರು.
ರಾಜಾಜಿನಗರದ ಕೆ.ಎಲ್.ಇ ಶಾಲೆಯಲ್ಲಿ ಸುತ್ತ ಮುತ್ತಲಿನ ಶಾಲಾ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೊತೆಗೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಮೋದಿ ಅವರ ಕನಸಿನ ಭಾರತವನ್ನು ಮಕ್ಕಳಿಗೆ ತೆರೆದಿಟ್ಟರು. ಮಕ್ಕಳು ಪರೀಕ್ಷೆಗೆ ಆತಂಕ ಪಡಬೇಡಿ. ಪರೀಕ್ಷೆ ಕೇವಲ ಶೈಕ್ಷಣಿಕ ಗುಣಮಟ್ಟ ಅಳೆಯಲು ಮಾತ್ರ. ಅದು ಜೀವನದ ಪರೀಕ್ಷೆ ಅಲ್ಲ. ಹೀಗಾಗಿ ಮಕ್ಕಳು ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಅಂತ ಸಲಹೆ ನೀಡಿದರು.
ಪ್ರಧಾನಮಂತ್ರಿಗಳ "#ಪರೀಕ್ಷಾ_ಪೇ_ಚರ್ಚಾ" ಕಾರ್ಯಕ್ರಮವನ್ನು ಬೆಂಗಳೂರಿನಿಂದ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಲು ಕ್ಷಣಗಣನೆ.
ನನ್ನೊಡನೆ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ ಜಗದೀಶ್, ಸಮಗ್ರ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ ರೇಜು ಉಪಸ್ಥಿತರಿದ್ದಾರೆ. pic.twitter.com/6m1Vpc5sOG
— S.Suresh Kumar (@nimmasuresh) January 20, 2020
ಮೋದಿ ಅವರ ಪರೀಕ್ಷಾ ಆಂತಕ ನಿವಾರಣೆಯ ಪುಸ್ತಕ ಓದುವಂತೆ ಸಲಹೆ ನೀಡಿದರು. ಇದಲ್ಲದೆ ಮಕ್ಕಳ ಜೊತೆ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರು. ಪರೀಕ್ಷೆ ಕುರಿತು ಮಕ್ಕಳ ಪ್ರಶ್ನೆಗೆ ತಾಳ್ಮೆಯಿಂದ ಉತ್ತರ ಕೊಟ್ಟ ಸಚಿವರು ಮಕ್ಕಳ ಅನುಕೂಲವಾಗುವ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.