ತುಮಕೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಮನೆಹಾಳ. ಮೋದಿ ಕ್ಯಾಬಿನೆಟ್ನಲ್ಲಿ ಇರುವವರು ತಿಕ್ಕಲರು. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಗೂಳೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಅಧಿಕಾರಕ್ಕೆ ಬರುವ ಮುನ್ನ ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡ್ತಿನಿ ಅಂದಿದ್ದ ಮೋದಿ ಹೇಳಿದಂತೆ ನಡೆದುಕೊಂಡಿದ್ದಾನಾ? ರೈತರ ಸಾಲ ಮನ್ನಾ ಮಾಡಿದ್ದಾನಾ? ಮೋದಿ ಅಣ್ಣಾನೇ ಬಂದು ತುಮಕೂರಿನ ಫುಡ್ ಪಾರ್ಕ್ ಉದ್ಘಾಟನೆ ಮಾಡಿಹೋದ. ಈಗ ಅಲ್ಲಿ ಏನಾಗ್ತಿದೆ ಅಂತ ಅವರಿಗೆ ಗೊತ್ತಾ? ಮೋದಿ ಒಬ್ಬ ಮನೆಹಾಳ, ಅವನ ಕ್ಯಾಬಿನೆಟ್ನಲ್ಲಿ ಇರುವವರು ತಿಕ್ಕಲರು. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡ್ತಾರೆ. ಸಂವಿಧಾನ ಬದಲಿಸುತ್ತೇನೆ ಎಂದು ಹೇಳುವ ತಿಕ್ಕಲರು ಅವರೆಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.
ಬಳಿಕ ತುಮಕೂರು ಕ್ಷೇತ್ರದಿಂದ ದೇವೇಗೌಡರ ವಿರುದ್ಧ ಕಣಕ್ಕಿಳಿದಿರುವ ಪಾಪಿಗೆ ವೋಟು ಹಾಕುವ ನೀಚ ಕೆಲಸ ಮಾಡಬೇಡಿ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಟೀಕಿಸಿದರು. ದೇವೇಗೌಡರ ಬಗ್ಗೆ ಮಾತನಾಡೋ ಬಸವರಾಜು ಒಬ್ಬ ಭಸ್ಮಾಸುರ. ಅವನು ಕಾಲು ಇಟ್ಟಲ್ಲೆಲ್ಲಾ ಜನರು ಭಸ್ಮವಾಗುತ್ತಿದ್ದಾರೆ. ಬಸವರಾಜು ಸೊಗಡು ಶಿವಣ್ಣರನ್ನ ಮೂಲೆ ಗುಂಪು ಮಾಡಿದ್ದಾರೆ. ಅಂಥವನು ದೇವೇಗೌಡರ ಮೇಲೆ ಆರೋಪ ಮಾಡುತ್ತಾನೆ. ಮಾನ ಮರ್ಯಾದೆ ಇದ್ದರೆ ಬಸವರಾಜು ಚುನಾವಣೆಗೆ ನಿಲ್ಲುತ್ತಿರಲಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.