– ಮೃತರ ಕುಟುಂಬಗಳಿಗೆ ಸ್ಥಳದಲ್ಲೇ 25 ಸಾವಿರ ನೀಡಿದ್ರು
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಿ ದೇವಾಲಯದಲ್ಲಿ ಪ್ರಸಾದ ಸೇವನೆಯಿಂದ ಅಸ್ವಸ್ಥರಾದವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೆಯೇ ಮೃತರ ಕುಟುಂಬದವರಿಗೆ ಸ್ಥಳದಲ್ಲೇ 25 ಸಾವಿರ ಹಣ ನೀಡಿದರು. ಅಲ್ಲದೆ ಪ್ರಸಾದ ಸೇವನೆಯಿಂದ ಇದೂವರೆಗೆ 11 ಜನರು ಪ್ರಾಣ ಬಿಟ್ಟಿದ್ದಾರೆ. ಕೊಳ್ಳೇಗಾಲ ಹಾಗೂ ಮೈಸೂರು ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದೆ. ಮಾರಮ್ಮನ ಪ್ರಸಾದ ಸೇವಿಸಿ ಭಕ್ತಾದಿಗಳು ಸಾವನ್ನಪ್ಪಿರುವುದು ವಿಪರ್ಯಾಸ. ಪ್ರಸಾದದಲ್ಲಿ ವಿಷ ಸೇರಿಸಿ ಹೀಗೆ ಅಮಾಯಕರ ಬಲಿ ಪಡೆದಿರೋ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಂತಾಪ ಸೂಚಿಸಿದರು.
ಸಚಿವ ಪುಟ್ಟರಂಗಶೆಟ್ಟಿ ಅವರ ಜೊತೆ ಹನೂರು ಶಾಸಕ ಆರ್ ನರೇಂದ್ರ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಷ್ಟೆ ಅಲ್ಲದೆ ಈಗಾಗಲೇ ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೌಪ್ಯವಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಅದರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಈ ಪ್ರಕರಣ ಸಂಬಂಧಿತ ತನಿಖೆಗಾಗಿ ಉನ್ನತ ಅಧಿಕಾರಿಗಳನ್ನೇ ನೇಮಿಸಲಾಗುತ್ತದೆ. ಮೈಸೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಸ್ವಸ್ಥರ ಚಿಕಿತ್ಸೆಗೆಂದು ಹೆಚ್ಚುವರಿ ವೈದ್ಯರನ್ನು ನೇಮಿಸಿದ್ದೇವೆ. ಈ ಘಟನೆ ಸಂಬಂಧಿತ ಯಾವುದೇ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv