ತುಮಕೂರು: ಕೇವಲ ಕಾನೂನು ಖಾತೆ ಮಾತ್ರ ಕೊಟ್ಟರೆ ನನ್ನ ಮನಸ್ಸಿಗೆ ತುಂಬಾ ನೋವಾಗುತಿತ್ತು ಎಂದು ಹೇಳುವ ಮೂಲಕ ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಪ್ರಭಾವಿ ಖಾತೆಯ ತಮ್ಮ ನಿರೀಕ್ಷೆಯನ್ನು ಹೊರಹಾಕಿದ್ದಾರೆ.
ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬರೀ ಕಾನೂನು ಖಾತೆ ಮಾತ್ರ ಕೊಟ್ಟರೆ ನನ್ನ ಮನಸ್ಸಿಗೆ ನೋವಾಗುತಿತ್ತು. ಅದರ ಜೊತೆಗೆ ಸಣ್ಣ ನೀರಾವರಿನೂ ಕೊಟ್ಟಿದ್ದರಿಂದ ಸ್ವಲ್ಪ ಸಮಾಧಾನವಾಗಿದೆ ಎಂದು ಹೇಳಿದ್ದಾರೆ.
ಸಣ್ಣ ನೀರಾವರಿ ಕೊಟ್ಟಿದ್ದರಿಂದ ಕೆರೆಕಟ್ಟೆಗಳಿಗೆ ನೀರು ಹರಿಸುವ ಕೆಲಸ ಮಾಡಬಹುದು. ಆ ಕೆಲಸವನ್ನು ನಾನು ನಿಮಗೆ ಮಾಡಿಕೊಡುತ್ತೇನೆ. ಅಲ್ಲಿಗ ಮಗ, ಇಲ್ಲಿಗೆ ಅಳಿಯ ನಾನು. ಹಾಗಾಗಿ ನನಗೇನೂ ವ್ಯತ್ಯಾಸವಿಲ್ಲ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ. ಶಾಸಕನಾಗಿ 30 ವರ್ಷ ಆಯಿತು. ಆದರೂ ನನಗೆ ಸಚಿವನಾಗಬೇಕು ಅನ್ನಿಸಿರಲಿಲ್ಲ. ಜನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರಲ್ವ ಸಾಕು ಅಂತ ಊರಲ್ಲಿ ಆರಾಮಾಗಿದ್ದೆ. ನಿನ್ನೆನೂ ನಾಯಕರೊಬ್ಬರು ಎಲ್ಲಿದ್ದೀಯಾ ಎಂದು ಕೇಳಿದ್ರೆ. ಆಗ ನಾನು ಊರಲ್ಲಿ ಅಂದೆ. ಮಂತ್ರಿ ಆಗಿದ್ದಿ ಮಾರಾಯ ಎಂದು ಅವರು ಹೇಳಿದ್ರು. ಆಗ ನಾನು ಏನು ಮಾಡೋದು ನನ್ನ ಕ್ಷೇತ್ರ ಬಿಡೋಕಾಗುತ್ತೆ ಎಂದು ಉತ್ತರಿಸಿದೆ ಎಂದರು.
ಜೊತೆಗೆ ಈ ಮಂತ್ರಿಗಿರಿ ಅನ್ನೋದು ನಾಟಕದಲ್ಲಿನ ರಾಜನ ಪಾತ್ರ ಇದ್ದಹಾಗೆ. ನಾಟಕದಲ್ಲಿ ಮಹಾಪ್ರಭು ಎನ್ನುತ್ತಾರೆ. ಪಾತ್ರ ಮುಗಿದ ಬಳಿಕ ಯಾರೂ ಪಾತ್ರದ ವ್ಯಕ್ತಿಗೆ ಬೆಲೆ ಕೊಟ್ಟು ಪ್ರಭು ಅನ್ನೋದಿಲ್ಲ. ನಾಟಕದ ರಾಜನಪಾತ್ರಕ್ಕೆ ಹೆಚ್ಚಿಗೆ ಬೆಲೆ ಕೊಡಬೇಡಿ. ಅವು ಯಾವಾಗ ಬರುತ್ತೊ ಯಾವಾಗಾ ಹೋಗುತ್ತೋ ಗೊತ್ತಿಲ್ಲ. ಹೀಗಾಗಿ ನಮ್ಮತನವನ್ನ ನಾವು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.