ಕೊಪ್ಪಳ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವಿಧಾನಸಭೆ ಕಲಾಪದಲ್ಲಿ ಬ್ಲೂಫಿಲಂ ನೋಡಿದ್ದನ್ನು ಮನುಷ್ಯತ್ವ ಇರುವವರು ಯಾರೂ ಒಪ್ಪಿಕೊಳ್ಳಲ್ಲ. ಒಂದು ತಪ್ಪಿಗೆ ಅನೇಕ ಬಾರಿ ಶಿಕ್ಷೆ ಕೊಡುವ ಕಾನೂನು ಎಲ್ಲೂ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಲಕ್ಷ್ಮಣ ಸವದಿ ಅವರನ್ನು ಸಮರ್ಥನೆ ಮಾಡಿಕೊಂಡಿಲ್ಲ. ಸಮರ್ಥನೆ ಮಾಡಿಕೊಳ್ಳುವ ಜಾಯಮಾನವೂ ನನ್ನದಲ್ಲ. ಅದೊಂದು ಆಕಸ್ಮಿಕ ಘಟನೆ. ಆಗಿದ್ದು ತಪ್ಪು, ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅದನ್ನೇ ಯಾಕೆ ಪದೇ ಪದೇ ಮಾತನಾಡುತ್ತಿದ್ದಾರೆ. ಸವದಿ ಅವರಿಗೆ ಶಿಕ್ಷೆಯಾಗಿದೆ. ಶಿಕ್ಷೆಯಾದ ಮೇಲೆ ಮಾಜಿ ಸಿಎಂ ಪದೇ ಪದೇ ಅದನ್ನೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪಿತಸ್ಥ ಅಂತ ಜಾರಿ ನಿರ್ದೇಶನಾಲಯ ಬಂಧಿಸಿಲ್ಲ. ಅಂದಮೇಲೆ ನಮ್ಮ ಪಾತ್ರ ಇನ್ನು ಆರಂಭವಾಗಿಲ್ಲ ಎಂದು ಬಂಧನದ ಹಿಂದೆ ಕೈವಾಡ ಇದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ಸಿದ್ದರಾಮಯ್ಯ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರ ಗರಡಿಯಲ್ಲಿ ಬೆಳೆದು ಇದೀಗ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮೊದಲು ಸಿದ್ದರಾಮಯ್ಯ ಅವರ ಮನೆ ತೊಳೆದುಕೊಳ್ಳಲಿ. ಒಂದು ತಿಂಗಳಾದರೂ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಿಲ್ಲ. ಒಂದು ತಿಂಗಳಿಂದ ಹೆಸರು ಕೇಳುತ್ತಿದ್ದೇವೆ ಹೆಸರು ಕೊಡುತ್ತಿಲ್ಲ. ಕಾಂಗ್ರೆಸ್ನ ಮುಖಂಡರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಹಾಗೂ ಪರಮೇಶ್ವರ್ ಅವರು ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರವು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ತುರ್ತು ಪರಿಹಾರ ಕೊಟ್ಟಿದೆ. ಆದರೆ ನಷ್ಟ ಎಷ್ಟಾಗಿದೆ ಎನ್ನುವುದು ನಿರೀಕ್ಷೆ ಮಾಡಲಾಗಿಲ್ಲ. ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಮಳೆ ಇರುವುದರಿಂದ ನಿರೀಕ್ಷಿತ ನಷ್ಟದ ಪ್ರಮಾಣ ತಿಳಿಯಲು ಸಾಧ್ಯವಿಲ್ಲ. ಕೇಂದ್ರದಿಂದ ಹಣ ತಂದು ಕಾರ್ಯಕ್ರಮ ಅನುಷ್ಠಾನ ಮಾಡುವ ಶಕ್ತಿ ನಮಗಿದೆ. ಆ ಕಾಲ ನಮಗಿನ್ನೂ ಬಂದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.
ಪ್ರವಾಹ ಪೀಡಿತ ಪ್ರದೇಶದ ಸಾಲಗಾರರಿಗೆ ಹಣ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಾಯ ಮಾಡುವಂತಿಲ್ಲ. ನಾವು ಬ್ಯಾಂಕ್ನವರ ಜೊತೆ ಮಾತಾಡುತ್ತಿದ್ದೇವೆ ಎಂದು ತಿಳಿಸಿದರು.