ಬೆಂಗಳೂರು: ವಿಶ್ವಾಸಮತ ಯಾಚನೆ ವೇಳೆ ಸರ್ಕಾರವನ್ನು ಕಾಪಾಡಿದ್ದ ಸಚಿವ ಡಿಕೆ ಶಿವಕುಮಾರ್ ಇಂದು ಕೂಡ ಆಸರೆಯಾಗುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಈಗಾಗಲೇ ದೆಹಲಿಗೆ ತೆರಳಿರುವ ಡಿಕೆಶಿ ಅಲ್ಲೇ ಕುಳಿತು ದೋಸ್ತಿ ಸರ್ಕಾರ ರಕ್ಷಣೆಗಿಳಿಯಲಿದ್ದಾರೆ. ದೆಹಲಿಯಲ್ಲೇ ಕುಳಿತು ಬಿಜೆಪಿ ಆಪರೇಷನ್ ಯತ್ನಕ್ಕೆ ಠಕ್ಕರ್ ಕೊಡಲು ಸಿದ್ಧರಾಗುತ್ತಿದ್ದು, ಆಪರೇಷನ್ಗೆ ಕೌಂಟರ್ ಆಗಿ ದಾಖಲೆ ಬಿಡುಗಡೆಯ ದಾಳ ಉರುಳಿಸಲು ಡಿಕೆಶಿ ಪ್ಲಾನ್ ರೂಪಿಸಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಾಂಗ್ರೆಸ್ನ ಹಿರಿಯ ನಾಯಕರ ಜೊತೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹಣಕಾಸು ವ್ಯವಹಾರವೊಂದಕ್ಕೆ ಸಂಬಂಧಿಸಿದ ಬಿಜೆಪಿ ನಾಯಕರ ದಾಖಲೆ ರಿಲೀಸ್ ಮಾಡಲಿದ್ದಾರೆ. ಅಲ್ಲದೆ ಜಿಂದಾಲ್ ಪ್ರಕರಣದ ಸಂಬಂಧ ಬಿಜೆಪಿ ನಾಯಕರು ನಡೆಸಲು ಮುಂದಾದ ಆರ್ಥಿಕ ವ್ಯವಹಾರದ ವಿಡಿಯೋ ಕೂಡ ರಿಲೀಸ್ ಮಾಡಲಿದ್ದಾರೆ. ಜೊತೆಗೆ ಶಾಸಕರಿಬ್ಬರನ್ನು ಬೆದರಿಸಿ, ಹಣದ ಆಮಿಷವೊಡ್ಡಿದ ದಾಖಲೆಯನ್ನೂ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೈ ನಾಯಕರು ಇನ್ನೂ ನಿಖರವಾಗಿ ಯಾವ ವ್ಯವಹಾರದ ದಾಖಲೆ ಅನ್ನೋದನ್ನು ಬಾಯಿ ಬಿಟ್ಟಿಲ್ಲ. ಆದರೆ ಇಂತದೊಂದು ದಾಖಲೆ ಡಿಕೆಶಿ ಕೈಸೇರಿ ದೆಹಲಿಗೆ ತಲುಪಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಮೂಲಕ ದಾಖಲೆ ಬಿಡುಗಡೆ ಮಾಡಲಿದ್ದಾರೆ. ರಹಸ್ಯವಾಗಿ ಕಾರ್ಯತಂತ್ರ ರೂಪಿಸಿ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಿ ಬಿಜೆಪಿ ಆಪರೇಷನ್ ಯತ್ನಕ್ಕೆ ಠಕ್ಕರ್ ಕೊಡಲು ರೆಡಿಯಾಗಿದ್ದಾರೆ. ಒಟ್ಟಿನಲ್ಲಿ ದೆಹಲಿಯಲ್ಲಿ ದಾಖಲೆ ಸಹಿತ ಬಿಡುಗಡೆ ಮಾಡಿ ಬಿಜೆಪಿಯನ್ನ ಕಟ್ಟಿ ಹಾಕುವ ಯತ್ನ ಮಾಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.