ತುಮಕೂರು: ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗಲಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುವುದು ಸಹಜ. ಒಂದು ವೇಳೆ ಬೇರೊಬ್ಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಪಕ್ಷ ನನಗೆ ಸ್ಥಾನ ತ್ಯಜಿಸುವಂತೆ ಹೇಳಿದ್ರೆ, ಖಂಡಿತವಾಗಿಯೂ ನಾನು ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಯುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಎಷ್ಟು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಅನ್ನೋದು ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಪಕ್ಷದ ವರಿಷ್ಠರ ಜೊತೆ ಮಾತನಾಡಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ. ಅಲ್ಲದೆ ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ. ಸಿಎಂ ಕೆಲವರಿಗೆ ಮುಂಚೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ. ಕೆಲ ನಾಯಕರ ಅಭಿಮಾನಿಗಳು ತಮ್ಮ ಮುಖಂಡರಿಗೆ ಡಿಸಿಎಂ ಪಟ್ಟ ಕೊಡಿ ಎಂದು ಒತ್ತಾಯ ಮಾಡುವುದರಲ್ಲಿ ತಪ್ಪೇನಿಲ್ಲ. ಎಲ್ಲದಕ್ಕೂ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.
ಇದೇ ವೇಳೆ ಪೌರತ್ವ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಚಿವ ಸಿ.ಟಿ.ರವಿ, ಕಾಂಗ್ರೆಸ್ ನವರು ತಾಲಿಬಾನಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಕಾಂಗ್ರೆಸ್ ನವರು ಅಂದು ಹುಟ್ಟಿಸಿದ ಪಾಪದ ಕೂಸು ಈಗ ಹೆಮ್ಮರವಾಗಿ ನಿಂತಿದೆ. ಅದಕ್ಕಾಗಿ ಪೌರತ್ವ ಕಾಯಿದೆ ತಿದ್ದುಪಡಿ ಅನಿವಾರ್ಯ. ತಾಲಿಬಾನಿಗಳು, ಕಾಂಗ್ರೆಸಿಗರು, ಕಮ್ಯೂನಿಸ್ಟ್ ರು ಒಟ್ಟಾಗಿ ಪಿತೂರು ಮಾಡಿ ಕೆಲ ರಾಜ್ಯದಲ್ಲಿನ ಹಿಂಸಾಚಾರಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಕೆಲಕಾಲ ಸಿದ್ದಗಂಗಾ ಮಠದ ಧ್ಯಾನ ಮಂದಿರದಲ್ಲಿ ಸಚಿವ ಸಿ.ಟಿ.ರವಿ ಧ್ಯಾನ ಮಾಡಿದರು. ಶಾಸಕರಾದ ಜ್ಯೋತಿಗಣೇಶ್, ಮಸಾಲೆ ಜಯರಾಮ್ ಸಚಿವರಿಗೆ ಸಾಥ್ ನೀಡಿದ್ದರು.