ಬೆಂಗಳೂರು: ಪಿಎಸ್ಐ (PSI) ಪರೀಕ್ಷಾ ಅಕ್ರಮದ ತನಿಖೆ ಸರ್ಕಾರದ ಬುಡಕ್ಕೆ ಬಂದಿದೆ. ರಾಜ್ಯಕ್ಕೆ ಅಮಿತ್ ಶಾ (AmitShah) ಆಗಮಿಸುತ್ತಿರೋ ಹೊತ್ತಲ್ಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ವಿರುದ್ಧ ಆರೋಪ ಕೇಳಿಬಂದಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಅಡ್ಡದಾರಿ ಮೂಲಕ ಪಿಎಸ್ಐ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದ ಮಾಗಡಿ ಮೂಲದ ದರ್ಶನ್ ಗೌಡರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿದಾಗ, ಸಚಿವ ಅಶ್ವತ್ಥ್ ನಾರಾಯಣ ಸಹೋದರ ಸತೀಶ್ಗೆ 80 ಲಕ್ಷ ರೂಪಾಯಿ ಲಂಚ ಕೊಟ್ಟ ಬಗ್ಗೆ ಬಾಯ್ಬಿಟ್ಟಿದ್ದರು ಎನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಐಡಿ (CID) ಪೊಲೀಸರು, ಸಚಿವ ಅಶ್ವತ್ಥ್ ನಾರಾಯಣ ಸಹೋದರನನ್ನು ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸಿದಾಗ, ಸಚಿವರು ಅಡ್ಡಿಯಾಗಿ ವಿಚಾರಣೆ ನಡೆಸದಂತೆ ತಡೆದಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೇ, ಸಿಐಡಿ ಅಧಿಕಾರಿಗಳು ರಾತ್ರೋರಾತ್ರಿ ಸಚಿವರ ಅಣ್ಣನನ್ನು ವಿಚಾರಣೆ ನಡೆಸದೇ ಬಿಟ್ಟು ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದ ಹಾಗೆ ದರ್ಶನ್ ಗೌಡ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖವಾಗದಂತೆ ಅಶ್ವತ್ಥ್ ನಾರಾಯಣ್ ನೋಡಿಕೊಂಡಿದ್ದಾರೆ ಅಂತ ಕಾಂಗ್ರೆಸ್ (Congress) ಮುಖಂಡರು ಆರೋಪಿಸಿದ್ದಾರೆ. ಮಾಗಡಿಯ ಮರೂರಿನ ದರ್ಶನ್ ಗೌಡ, ಮೊದಲ ಪೇಪರ್ ನಲ್ಲಿ 19 ಅಂಕ, ಎರಡನೇ ಪೇಪರ್ ನಲ್ಲಿ 141 ಅಂಕ ಪಡೆದಿದ್ದ. ಸಿಐಡಿ ಪೊಲೀಸರಿಗೆ ಅನುಮಾನ ಬಂದು ಓಎಂಆರ್ (OMR) ಶೀಟ್ನ್ನು ಎಫ್ಎಸ್ಎಲ್ (FSL) ಪರೀಕ್ಷೆಗೆ ಕಳಿಸಿದಾಗ, ಅದರಲ್ಲಿ ತಿದ್ದುಪಡಿ ಮಾಡಿದ್ದು ಮಾಡಿದ್ದು ಬಯಲಾಗಿತ್ತು. ಹೀಗಾಗಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ದರ್ಶನ್ ಗೌಡ, ಸಚಿವರ ಸಹೋದರನ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಬೆಳಗ್ಗೆ ಸಚಿವ ಅಶ್ವತ್ಥ್ ನಾರಾಯಣ ಹೆಸರೇಳದೆ ಆರೋಪ ಮಾಡಿದ ಡಿಕೆಶಿ (DK Shivakumar), ಸಂಜೆ ಹೊತ್ತಿಗೆ ಹೆಸರು ಬಹಿರಂಗಪಡಿಸಿ ತಿರುಗೇಟು ಕೊಟ್ಟರು. ಇದನ್ನೂ ಓದಿ: ಸವಾಲಿಗೆ ಜವಾಬ್ ವಾರ್ – ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದಾರಾ?