ಬಳ್ಳಾರಿ: ಜಿಲ್ಲೆಯಾದ್ಯಂತ ಪಡಿತರ ಅಂಗಡಿಗಳಿಗೆ (Ration Shop) ಗಬ್ಬೆದ್ದು ನಾರುತ್ತಿರುವ ಹುಳು ಹಿಂಡಿದ, ಹಿಟ್ಟಾದ ಜೋಳ (Milled Corn) ಸರಬರಾಜಾಗುತ್ತಿದೆ.
ಎರಡು ದಿನಗಳ ಹಿಂದೆ ಉಪ ಲೋಕಾಯುಕ್ತರು ಭೇಟಿ ಬಳಿಕವೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ತರಾತುರಿಯಲ್ಲಿ ಯೋಗ್ಯವಲ್ಲದ ಹುಳು ಮಿಶ್ರಿತ, ಹಿಟ್ಟಾದ ಜೋಳ ವಿತರಣೆಗೆ ಮುಂದಾಗಿದ್ದಾರೆ.
ನಗರದ ಎಪಿಎಂಸಿ ಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮೂರು ಗೋಡಾನ್ ಗಳಲ್ಲಿ ಈ ಜೋಳದ ಚೀಲಗಳನ್ನು ಸಂಗ್ರಹಿಸಿಡಲಾಗಿದೆ. ಗೋಡಾನ್ನಲ್ಲಿ ಸಂಗ್ರಹಿಸಿದ ಜೋಳ ಸಂಪೂರ್ಣ ಹಾಳಾಗಿದ್ದು ಹಾಳಾಗಿರುವ ಜೋಳವನ್ನೇ ಬಡವರ ಹೊಟ್ಟೆಗೆ ಸೇರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್ ಕೇಸ್ | ಮಗನನ್ನು ಗಲ್ಲಿಗೇರಿಸಿದ್ರೂ ಬೇಸರ ಇಲ್ಲ: ಸಂಜಯ್ ತಾಯಿ
ಜೋಳ ಸಂಗ್ರಹಿಸಿಟ್ಟಿರುವ ಗೋಡೌನ್ ಕಾಲಿಡುವುದಕ್ಕೂ ಸಾಧ್ಯ ಇಲ್ಲ. ಎಷ್ಟರ ಮಟ್ಟಿಗೆ ಅಂದರೆ ಒಳಗೆ ಕಾಲಿಟ್ಟರೆ ಘಾಟು ಹೊಡೆಯುತ್ತದೆ. ಒಂದು ಕೆಜಿ ಜೋಳದಲ್ಲಿ ಅರ್ಧ ಕೆಜಿ ಬರೀ ಹುಳು ಹಾಗೂ ಹಿಟ್ಟೇ ಸಿಗುತ್ತದೆ. ಗೋಡೌನ್ ನಲ್ಲಿ ಸಂಗ್ರಹಿಸಿಟ್ಟಿದ್ದ 40 ಸಾವಿರ ಚೀಲ ಜೋಳದ್ದು ಇದೇ ಪರಿಸ್ಥಿತಿ.
ಇದೇ ಜೋಳ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಗೋಡೌನ್ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲ, ನಾವು ಬಿಡುಗಡೆ ಮಾಡುತ್ತೇವೆ ಅಷ್ಟೇ ಎಂದು ಉಡಾಫೆಯ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ.