ಚಿಕ್ಕಮಗಳೂರು: ಹೊಸ ಕಮಿಟಿಯವರು 2020ರ ಲೆಕ್ಕಾಚಾರ ಕೇಳಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ (Tarikere) ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಉಷಾ (45) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ 3 ಪುಟಗಳ ಡೆತ್ ನೋಟ್ ಬರೆದಿಟ್ಟು, 25 ನಿಮಿಷದ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನೂ ಓದಿ: ಧಾರವಾಡ | ವಾರ್ಡರ್ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ – ಮೂವರ ವಿರುದ್ಧ FIR
2010ರಿಂದ ಉಷಾ ಹಾಲು ಉತ್ಪಾದಕರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದರು. ಹಾಲು ಉತ್ಪಾದಕರ ಸಂಘದಲ್ಲಿ ಹೊಸ ಕಮಿಟಿ ಬಂದ ಮೇಲೆ ಹಳೆಯ ಲೆಕ್ಕ-ದಾಖಲೆ ಕೇಳುತ್ತಿದ್ದರು. ಸಂಘದ ಹಣವನ್ನ ದುರುಪಯೋಗ ಮಾಡಿದ್ದಾರೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
2020ರ ಕೆಲಸಕ್ಕೆ ಈಗ ಬಿಲ್ ಕೇಳ್ತಾರೆ, ಎಲ್ಲಿಂದ ತರೋದು? ದಂಡ ಕಟ್ಟಿ ಎಂದಿದ್ದರೆ ಕಟ್ಟುತ್ತಿದ್ದೆ. ಆದರೆ ಕೋರ್ಟು, ಪೊಲೀಸ್ ಅಂತ ಹೆದರಿಸಿದ್ದೀರಿ. ನೀವು ಒಂದು ಅವಕಾಶ ನೀಡಿದ್ದರೆ, ನಮ್ಮ ಮಗಳ ತಬ್ಬಲಿ ಆಗ್ತಿರಲಿಲ್ಲ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಮಗಳ ಓದು-ಭವಿಷ್ಯ, ಮನೆ ಸಾಮಾನು, ಒಡವೆಗಳ ಬಗ್ಗೆಯೂ ಡೆತ್ ನೋಟ್ನಲ್ಲಿ ಸುದೀರ್ಘವಾಗಿ ಬರೆದಿದ್ದಾರೆ. ಇಡೀ ಊರೇ ಒಂದಾಗಿ ಅವಮಾನ ಮಾಡ್ತಿದ್ದೀರಿ. ಊರಿನ ಯುವಕರ ಚುಚ್ಚು ಮಾತಿನಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಬಸವಣ್ಣ ಕ್ಷಮಿಸಪ್ಪಾ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಉಷಾ ಪತಿ ರಮೇಶ್ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಷಾ ಆತ್ಮಹತ್ಯೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಊರಿನ 9 ಜನ ನಾಪತ್ತೆಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನೆಡೆಸುತ್ತಿದ್ದಾರೆ. ಇದನ್ನೂ ಓದಿ: ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್!

