ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ್ನಲ್ಲಿ ಬಿಹಾರದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡಿಪೋರ್ ಜಿಲ್ಲೆಯ ಅಜಾಸ್ ಪ್ರದೇಶದಲ್ಲಿ ಮಧ್ಯರಾತ್ರಿ ಈ ದಾಳಿ ನಡೆದಿದೆ.
ಮಧ್ಯರಾತ್ರಿಯಲ್ಲಿ ಭಯೋತ್ಪಾದಕರು ವಲಸೆ ಕಾರ್ಮಿಕ ಬಿಹಾರದ ಮಾಧೇಪುರದ ನಿವಾಸಿ ಮೊಹಮ್ಮದ್ ಅಮ್ರೇಜ್ಗೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಕಾರ್ಮಿಕ ಸಾವನ್ನಪ್ಪಿದ್ದಾನೆಂದು ವೈದ್ಯರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೈಕ್, ರಿಕ್ಷಾಗೆ ಗುದ್ದಿದ ಕಾರ್ – 6 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಶಾಸಕನ ಅಳಿಯ
ರಜೌರಿ ಜಿಲ್ಲೆಯ ಸೇನಾ ಶಿಬಿರದ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಇದಾದ ಒಂದು ದಿನದ ನಂತರ ವಲಸೆ ಕಾರ್ಮಿಕರ ಮೇಲೆ ಉದ್ದೇಶಿತ ದಾಳಿ ನಡೆದಿದೆ.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು, ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಎಂದು ಸೇನಾ ವಕ್ತಾರರು ನಿನ್ನೆ ಟ್ವೀಟ್ ಮಾಡಿ ತಿಳಿಸಿದ್ದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ
ಕಳೆದ ವಾರ, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಿಹಾರದ ವಲಸೆ ಕಾರ್ಮಿಕ ಮೊಹಮ್ಮದ್ ಮುಮ್ತಾಜ್ ಸಾವಿಗೀಡಾಗಿ, ಇಬ್ಬರು ಗಾಯಗೊಂಡಿದ್ದರು. ಗಾಯಗೊಂಡಿರುವ ಕಾರ್ಮಿಕರಾದ ಮೊಹಮ್ಮದ್ ಆರಿಫ್ ಮತ್ತು ಮೊಹಮ್ಮದ್ ಮಕ್ಬೂಲ್ ಕೂಡ ಬಿಹಾರ ಮೂಲದವರಾಗಿದ್ದಾರೆ.