– ಟಿಕಾಯತ್ ಮೇಲೆ ಮಸಿ ಬಳಿದ ಪ್ರಕರಣ
– ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
60 ದಿನದಲ್ಲೇ ಪ್ರಕರಣ ಸಂಬಂಧ 450 ಪುಟಗಳ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಘಟನೆ ಸಂಬಂಧ 20 ಮಂದಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಚಾರ್ಜ್ಶೀಟ್ ಸಲ್ಲಿಕೆ ಬೆನ್ನಲ್ಲೇ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಮಸಿ ಬಳಿಯಲು ವಾರದಿಂದ ಪೋನಿನಲ್ಲಿ ನಡೆಸಿದ ಸಂಭಾಷಣೆ, ಟೆಕ್ನಿಕಲ್ ದಾಖಲೆ, ಸಿಸಿಟಿವಿ ವಿಡಿಯೋ ವಿವರಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಚಾರ್ಜ್ಶೀಟ್ನಲ್ಲಿ ಏನಿದೆ?
ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಫೇಮಸ್ ಆಗಬೇಕು, ಕೇಂದ್ರದ ಪ್ರಮುಖ ನಾಯಕರು ಗುರುತಿಸಬೇಕೆಂದು ಆರೋಪಿಗಳು ಮಸಿ ಬಳಿದಿದ್ದಾರೆ. ಕರ್ನಾಟಕದಲ್ಲಿ ಜನಪ್ರಿಯರಾಗಬೇಕು, ಎಲ್ಲೇ ಹೋದರೂ ನಮ್ಮ ಕಡೆಯೇ ಎಲ್ಲರ ಗಮನ ಇರಬೇಕು ಎಂಬ ಆಶಯವನ್ನು ಹೊಂದಿದ್ದರು. ಇದನ್ನೂ ಓದಿ: ಟಿಕಾಯತ್ಗೆ ಮಸಿː ಒಳಗಡೆ ಮೋದಿಗೆ ಜೈ ಜೈ, ಹೊರಗಡೆ ಡೌನ್ ಡೌನ್ ಅಂದ್ರು
ರಾಕೇಶ್ ಟಿಕಾಯತ್ ಅವರು ಮೇ 29 ರಂದು ಬೆಂಗಳೂರಿಗೆ ಬಂದ ದಿನವೇ ಮೊಟ್ಟೆ, ಕೊಳೆತ ಟೊಮೆಟೊ ಎಸೆಯಲು ಪ್ಲಾನ್ ಮಾಡಿದ್ದರು. ಆದರೆ ಈ ಪ್ಲ್ಯಾನ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಗಾಂಧಿಭವನ ಬಳಿಯೂ ಮೊಟ್ಟೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಪೊಲೀಸ್ ಭದ್ರತೆ ಹಿನ್ನೆಲೆಯಲ್ಲಿ ಸ್ಟೇಜ್ಗೆ ಬಾಟಲಿಯಲ್ಲಿ ಮಸಿ ತೆಗೆದುಕೊಂಡು ಹೋಗಿದ್ದರು.
ಆರೋಪಿಗಳು ಟಿಕಾಯತ್ ಮೇಲೆ ಹಲ್ಲೆ ಮಾಡುವ ಯೋಚನೆ ಇರಲಿಲ್ಲ. ಆದರೆ ಶಿವಕುಮಾರ್ ಉದ್ರೇಕಗೊಳಗಾಗಿ ಲೋಗೊದಿಂದಲೇ ಹಲ್ಲೆ ಮಾಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?
ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಮೇ 30 ರಂದು ಸಭೆ ಕರೆಯಲಾಗಿತ್ತು. ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು.
ಈ ವೇಳೆ ಏಕಾಏಕಿ ನುಗ್ಗಿದ ಗ್ಯಾಂಗ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ, ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಮಾರಾಮಾರಿ ನಡೆದಿದ್ದು ಅಲ್ಲಿದ್ದ ವ್ಯಕ್ತಿಗಳು ಇವರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಶೆಟ್ಟಿ, ದಿಲೀಪ್ ಹಾಗೂ ಶಿವಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು.