ಬೆಂಗಳೂರು: ಚಳಿಗಾಲ ಶುರುವಾಗಿದೆ, ಚಳಿ ಜಾಸ್ತಿಯೂ ಇದೆ. ಹೀಗಾಗಿ ಉತ್ತರ ಭಾರತದಲ್ಲಿ ಹವಾಮಾನ ಇಲಾಖೆ ಚಳಿಗಾಳಿ ಅಲರ್ಟ್ ಘೋಷಣೆ ಮಾಡಿದೆ.
ಪ್ರತಿ ಬಾರೀ ಚಳಿಗಾಲದಲ್ಲಿ ಹೆಚ್ಚಿನ ಚಳಿಗೆ ಸಾವನ್ನಪ್ಪುವ ವರದಿಗಳು ಉತ್ತರ ಭಾರತದಲ್ಲಿ ಆಗುತ್ತಿರುತ್ತವೆ. ಈಗ ದಕ್ಷಿಣ ಭಾರತದಲ್ಲಿ ಚಳಿ ಹೆಚ್ಚಾಗುತ್ತಿದೆ. ಜೊತೆಗೆ ಚಳಿ ಮಿಶ್ರಿತ ಗಾಳಿ ಬಗ್ಗೆ ಹವಾಮಾನ ಇಲಾಖೆಯಿಂದ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೋಲ್ಡ್ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಳಿಗಾಳಿಯ ಅಲರ್ಟ್ ಘೋಷಣೆ ಮಾಡಿ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಚಳಿ ಇರಲಿದೆ ಎನ್ನಲಾಗಿದ್ದು, ಈಗಾಗಲೇ ಬೀದರ್ ನಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ದಾಖಲಾಗಿದೆ. ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡದಲ್ಲಿ 12-14 ಡಿಗ್ರಿ ತಾಪಮಾನ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ತಾಪಮಾನ 14 ಡಿಗ್ರಿಯವರೆಗೂ ದಾಖಲಾಗಿದೆ. ಇನ್ನೂ ಕೆಲ ದಿನಗಳು ಹೀಗೆ ಚಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪಬ್ಲಿಕ್ ಟಿವಿಗೆ ಕೆಎಸ್ಎನ್ಡಿಎಂಸಿ(ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ) ಕಿರಿಯ ವಿಜ್ಞಾನಿ ಗವಾಸ್ಕರ್ ಮಾಹಿತಿ ನೀಡಿದ್ದಾರೆ.