– ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ ಟೀಕೆ
ಬೆಳಗಾವಿ: ಕುಂದಾನಗರಿಯಲ್ಲಿ ಒಂದೆಡೆ ಮಧ್ಯರಾತ್ರಿಯೇ ಕನ್ನಡಿಗರು, ಕನ್ನಡ ಅಭಿಮಾನಿಗಳು 64ನೇ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ. ಆದರೆ ಇನ್ನೊಂದೆಡೆ ರಾಜ್ಯೋತ್ಸವವನ್ನು ವಿರೋಧಿಸಿ, ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಗಳನ್ನ ಕೊಟ್ಟು ಎಂಇಎಸ್(ಮಹಾರಾಷ್ಟ್ರ ಏಕಿಕರಣ ಸಮಿತಿ) ಪುಂಡಾಟ ಮೆರೆದಿದೆ.
ರಾಜ್ಯೋತ್ಸವ ವಿರುದ್ಧ ಎಂಇಎಸ್ ಇಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ ಮಾಡುತ್ತಿದೆ. ನಗರದ ಸಂಭಾಜಿ ವೃತ್ತದಿಂದ ಬಸವೇಶ್ವರ ಸರ್ಕಲ್ವರೆಗೆ ಸೈಕಲ್ ರ್ಯಾಲಿಯನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ್, ದೀಪಕ್ ದಳವಿ ಹಾಗೂ ಅನೇಕ ಎಂಇಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೆರವಣಿಗೆಯಲ್ಲಿ ಕಿಡಿಕೇಡಿಗಳು ಕರ್ನಾಟಕ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ವ್ಯಂಗ್ಯ ಚಿತ್ರ ಪ್ರದರ್ಶನ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ, ಕೇಂದ್ರ ಸರ್ಕಾವನ್ನು ದೃತರಾಷ್ಟ್ರನಿಗೆ ಹೋಲಿಸಿದ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್
ಅಷ್ಟೇ ಅಲ್ಲದೆ ಮರಾಠಿ ಭಾಷಿಕರ ಮಾನ ಹರಣ ಮಾಡಿದ ಕರ್ನಾಟಕ ಸರ್ಕಾರ, ಅನ್ಯಾಯವನ್ನು ನೋಡುತ್ತಿರುವ ಮಹಾರಾಷ್ಟ್ರ ಸರ್ಕಾರ, ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದ್ದು ಎಂದು ಪ್ರಶ್ನೆ ಮಾಡಿರುವ ವ್ಯಂಗ್ಯ ಬರಹ ಹಾಗೂ ಚಿತ್ರಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಎಂಇಎಸ್ ನಾಯಕರು ಕರ್ನಾಟವನ್ನು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ:ಕುಂದಾನಗರಿಯಲ್ಲಿ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ
ಇವೆಲ್ಲರ ನಡುವೆ ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿರುವುದು ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಮತದಾರರ ಒಗ್ಗೂಡಿಸುವ ಎಂಇಎಸ್ ಯತ್ನ ವಿಫಲವಾಗಿದ್ದು, ಮಹಾರಾಷ್ಟ್ರದ ನಾಯಕರು ಎಂಇಎಸ್ಗೆ ಕೈಕೊಟ್ಟಿದ್ದಾರೆ. ಪ್ರತಿ ಕರಾಳ ದಿನ ಆಚರಣೆಗೆ ಬರುತ್ತಿದ್ದ ಮಹಾರಾಷ್ಟ್ರ ನಾಯಕರು ಈ ವರ್ಷ ಎಂಇಎಸ್ ಮನವಿಗೆ ಸ್ಪಂದಿಸಿಲ್ಲ.