ಬಳ್ಳಾರಿ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ಎಂಬಿಬಿಎಸ್ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಬಳ್ಳಾರಿಯ ಕೃಷ್ಣಾನಗರದಲ್ಲಿ ನಡೆದಿದೆ.
ವಿದ್ಯಾ ನೇಣಿಗೆ ಶರಣಾದ ವಿದ್ಯಾರ್ಥಿನಿ. ಜಿಲ್ಲೆಯ ಕೃಷ್ಣಾನಗರದ ನಿವಾಸಿಯಾಗಿರುವ ವಿದ್ಯಾ, ಬಳ್ಳಾರಿಯ ವಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ 2ನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಸಿಇಟಿಯ ಸರ್ಕಾರ ಖೋಟಾದಲ್ಲಿ ಆಯ್ಕೆಯಾಗಿದ್ದ ವಿದ್ಯಾ ಸದಾ ಓದಿನಲ್ಲಿ ಮುಂದಿದ್ದಳು. ಬುಧವಾರ ಎರಡನೇ ಸೆಮಿಸ್ಟರ್ ಮೈಕ್ರೋ ಬಯಾಲಜಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿತ್ತು. ಉಳಿದ ವಿಷಯಗಳಲ್ಲಿ ಪಾಸ್ ಆಗಿದ್ದ ವಿದ್ಯಾ ಮೈಕ್ರೋ ಬಯಾಲಜಿ ವಿಷಯದಲ್ಲಿ ಕೇವಲ 5 ಅಂಕ ಕಡಿಮೆ ಬಂದಿದ್ದಕ್ಕೆ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮಗಳು ನೇಣಿಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಶಾಸಕ ಶ್ರೀರಾಮುಲು ಶವಾಗಾರಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸಹಪಾಠಿಗಳು ಸಹ ವಿದ್ಯಾ ಹೀಗೆ ಮಾಡಿಕೊಳ್ಳಬಾರದಿತ್ತು ಅಂತಾ ಕಣ್ಣೀರು ಹಾಕಿದ್ದಾರೆ.
ವಿದ್ಯಾಳ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ವಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನೀರವ ಮೌನ ಮಡುಗಟ್ಟಿದೆ. ಈ ಘಟನೆಯ ಬಗ್ಗೆ ಕೌಲಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv