ಬೆಂಗಳೂರು: ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರು ಮುಂದೆ ನಿನ್ನನ್ನು ನೋಡಿಕೊಳ್ಳುತ್ತೀನಿ ಎಂದು ನನಗೆ ಬೆದರಿಕೆ ಹಾಕಿದ್ದರು ಎಂದು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದ್ದಾರೆ.
ಶಾಸಕ ಶಿವಮೂರ್ತಿ ನಾಯ್ಕ್ ಅವರು ಕಚೇರಿಗೆ ಬಂದು ಹೇಗೆ ಬೆದರಿಕೆ ಹಾಕಿದ್ದರು ಎನ್ನುವುದನ್ನು ರಾಜೇಂದ್ರ ಕುಮಾರ್ ಕಟಾರಿಯಾ ಪಬ್ಲಿಕ್ ಟಿವಿಗೆ ವಿವರಿಸಿದ್ದಾರೆ.
ಸೋಮವಾರ ಶಿವಮೂರ್ತಿನಾಯ್ಕ್ ಅವರು ತಮ್ಮ ಮಗನ ಕೇಸ್ ಬಗ್ಗೆ ಕಚೇರಿಗೆ ಬಂದು ನಿಮ್ಮಲ್ಲಿ ಅರ್ಜಿ ಪೆಂಡಿಂಗ್ ಇದೆ, ಅದನ್ನು ಬೇಗನೆ ಅನುಮೋದನೆ ನೀಡಬೇಕೆಂದು ಕೇಳಿದರು.
ನಾನು ಅವರಿಗೆ ಇದನ್ನು ಕಾನೂನಾತ್ಮಕವಾಗಿ ಅನುಮೋದನೆ ಮಾಡಲು ಬರುವುದಿಲ್ಲ. ನಿಮ್ಮ ಅರ್ಜಿ ನಿರ್ದೇಶಕರ ಹತ್ತಿರ ಪೆಂಡಿಂಗ್ ಇದೆ, ಅವರು ಅವರ ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಬರುತ್ತೋ ಅದನ್ನು ಮಾಡುತ್ತಾರೆ ಎನ್ನುವುದನ್ನು ವಿವರಿಸಿದೆ.
ನಾನು ತಿಳಿಸಿದರೂ ಅವರು ಇವತ್ತೇ ನನಗೆ ಬೇಕು, ಇವತ್ತೆ ಆರ್ಡರ್ ಕೊಡಬೇಕು ಎಂದು ವಾದಿಸುತ್ತಿದ್ದರು. ಜೋರಾಗಿ ಬಾಯಿ ಮಾಡುತ್ತಿದ್ದರು. ತುಂಬಾ ಅವಾಚ್ಯ ಶಬ್ಧಗಳನ್ನು ಬಳಸುತ್ತಿದ್ದರು. ನಾನು ನಿರಾಕರಿಸಿದ್ದಕ್ಕೆ ನಿನ್ನ ಮುಂದೆ ನೋಡ್ಕೋತ್ತೀನಿ ಅಂತ ಎಲ್ಲಾ ಹೆದರಿಸಿದರು. ತುಂಬಾ ಜಾಸ್ತಿನೆ ಜಗಳ ಆಯ್ತು ಅದರ ಬಗ್ಗೆ ನಾನು ವಿವರವಾಗಿ, ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಅವರಿಗೆ ದೂರು ಕೊಟ್ಟಿದ್ದೇನೆ. ಇವತ್ತು ನಾನು ಸಿಎಂ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಎಸ್ಸಿ, ಎಸ್ಟಿ ಅನುಕೂಲಗಳಿಗೆ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ, ಆ ಪಂಗಡಗಳಿಗೆ ಏನು ಸಿಗಬೇಕೋ ಅದು ಸಿಗುತ್ತದೆ. ಅವುಗಳಿಗಾಗಿ ಬೇರೆ ಬೇರೆ ಕಛೇರಿಗಳಿವೆ. ಅನುದಾನ ಏನು ನೀಡಬೇಕೋ ಅದನ್ನು ಸರಿಯಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರು ನನಗೆ ಭರವಸೆಯನ್ನು ನೀಡಿದ್ದಾರೆ. ಇಂತಹ ನಾನ್ ಸೆನ್ಸ್ ಗಳಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ನಾನು ನೋಡಿಕೊಳ್ಳುತ್ತೇನೆ. ನಿಮ್ಮ ಡ್ಯೂಟಿಯನ್ನು ನೀವು ಮಾಡಿ ಎಂದು ಹೇಳಿದ್ದಾರೆ. ಸಿಎಂ ಅವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.
ತಮ್ಮ ಪುತ್ರ ಸೂರಜ್ ಎಸ್. ನಾಯ್ಕ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿಲ್ಲ ಎನ್ನುವ ಕಾರಣಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಅವರಿಗೆ ರಾಜೇಂದ್ರ ಕುಮಾರ್ ಕಟಾರಿಯಾ ದೂರು ನೀಡಿದ್ದರು.
ಅಕ್ಟೋಬರ್ 9ರಂದು ಕಚೇರಿಗೆ ನುಗ್ಗಿದ ಶಿವಮೂರ್ತಿ ನಾಯ್ಕ್ ತಕ್ಷಣವೇ ಕಡತ ತರಿಸಿ ಗಣಿಗಾರಿಕೆಗೆ ಅನುಮೋದನೆ ನೀಡಬೇಕೆಂದು ಒತ್ತಡ ಹೇರಿದರು. ನಾನೇ ಸರ್ಕಾರ. ನನ್ನ ಆದೇಶವನ್ನು ಪಾಲಿಸಲೇಬೇಕು ಎಂದು ಕೂಗಾಡಿದರು ಎಂದು ಕಟಾರಿಯಾ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಟಾರಿಯಾಗೆ ಬೆದರಿಕೆ ಹಾಕಿದ್ದ ಶಾಸಕ ಶಿವಮೂರ್ತಿಗೆ ಸಿಎಂ ಕ್ಲಾಸ್ ತೆಗೊಂಡಿದ್ದು ಹೀಗೆ