-ನಂಗೂ ಆಕೆಗೂ ಸಂಬಂಧವಿಲ್ಲ ಎಂದ ಪ್ರೇಮಿ
ಕೊಪ್ಪಳ: ಯುವತಿಯೊಬ್ಬಳು ಪತಿಯನ್ನು ಬಿಟ್ಟು ಪ್ರಿಯಕರ ಬೇಕೆಂದು ಹಠ ಮಾಡುತ್ತಿದ್ದು, ಇದೀಗ ಮಾಜಿ ಪ್ರೇಯಸಿ ಕಾಟಕ್ಕೆ ಯುವಕ ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ಕೊಟ್ನೆಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬಸಮ್ಮ, ವಿನಯ್ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಯ ಬಗ್ಗೆ ಪೋಷಕರಿಗೆ ತಿಳಿದಿದ್ದು, ನಂತರ ಈ ವಿಚಾರವಾಗಿ ಗ್ರಾಮದಲ್ಲಿ ಪಂಚಾಯ್ತಿ ಆದ ಬಳಿಕ ಬೇರೆ ಯುವಕನ ಜೊತೆ ಬಸಮ್ಮ ಮದುವೆಯಾಗಿದ್ದಳು. ಬಸಮ್ಮನ ಮದವೆ ನಂತರ ಪ್ರಿಯತಮ ವಿನಯ್ಕುಮಾರ್ ದೂರ ಉಳಿದಿದ್ದನು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಬಸಮ್ಮನ ಪ್ರೀತಿಯ ವಿಚಾರ ಪತಿಗೆ ತಿಳಿದಿದ್ದು, ಬಳಿಕ ಹಿರಿಯರ ಸಮ್ಮುಖದಲ್ಲಿ ಬಸಮ್ಮ ವಿಚ್ಛೇದನ ಪಡೆದುಕೊಂಡಿದ್ದಳು.
ವಿಚ್ಛೇದನ ಬಳಿಕ ಮಾಜಿ ಪ್ರಿಯಕರನ ಮನೆಗೆ ಬಂದು ಪತಿ ಬೇಡ, ನನಗೆ ನನ್ನ ಪ್ರಿಯತಮ ಬೇಕು ಎಂದು ಮನೆ ಮುಂದೆ ಹಠ ಹಿಡಿದು ಕುಳಿತಿದ್ದಾಳೆ. ಯುವತಿಯ ನಿರ್ಧಾರಕ್ಕೆ ಯುವಕ ಮತ್ತು ಮನೆಯವರು ತಬ್ಬಿಬ್ಬಾಗಿದ್ದು, ಈಗಾಗಲೇ ಬೇರೆಯವನನ್ನ ಮದುವೆಯಾಗಿದ್ದಕ್ಕೆ ಯುವಕ ಮತ್ತು ಮನೆಯವರು ಬಸಮ್ಮನನ್ನು ನಿರಾಕರಿಸಿದ್ದಾರೆ. ಆದರೆ ಬಸಮ್ಮ ನನಗೆ ವಿನಯ್ ಬೇಕೇ ಬೇಕು ಎಂದು ನಾಲ್ಕು ದಿನದಿಂದ ಮನೆ ಮುಂದೆ ಕುಳಿತಿದ್ದಾಳೆ. ಬಸಮ್ಮನ ಹಠಕ್ಕೆ ಯುವಕನ ಮನೆಯವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.
ಬಸಮ್ಮ ಹೇಳೋದೇನು?:
ನಾನು ವಿನಯ್ಕುಮಾರ್ 2 ವರ್ಷದಿಂದ ಪ್ರೀತಿಸುತ್ತಿದ್ದೆವು. ಆದರೆ ನಮ್ಮ ಮನೆಯಲ್ಲಿ ಜಾತಿ ಬೇರೆ ಎಂದು ನಮ್ಮಿಬ್ಬರ ಮದುವೆಗೆ ಒಪ್ಪಲಿಲ್ಲ. ನಂತರ ಬಲವಂತವಾಗಿ ಬೇರೆ ಹುಡುಗನ ಜೊತೆ ಮದುವೆ ಮಾಡಿದ್ದರು. ಮದುವೆಯಾದರೂ ನಾವಿಬ್ಬರು ಮೆಸೇಜ್ ಮಾಡುತ್ತಿದ್ದು, ಮಾತನಾಡುತ್ತಿದ್ದೆವು. 2 ತಿಂಗಳು ಆದ ಮೇಲೆ ಈ ಬಗ್ಗೆ ಪತಿಗೆ ಗೊತ್ತಾಗಿ ನನ್ನನ್ನು ತವರು ಮನೆಗೆ ಬಿಟ್ಟು ಹೋಗಿದ್ದರು. ವಿಚ್ಛೇದನದ ಬಳಿಕ ನನ್ನನ್ನು ವಿನಯ್ ಮದುವೆಯಾಗಿದ್ದಾರೆ. ಆದರೆ ಅವರ ಮನೆಯವರು ಒಪ್ಪದೆ ಅವರಿಗೆ ಹೊಡೆದು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ನನಗೆ ವಿನಯ್ ಬೇಕು. ಹೀಗಾಗಿ ನಾಲ್ಕು ದಿನದಿಂದ ನಾನು ಅವರ ಮನೆಯ ಮುಂದೆ ಕುಳಿತಿದ್ದೀನಿ ಎಂದು ಬಸಮ್ಮ ಹೇಳುತ್ತಿದ್ದಾರೆ.
ವಿನಯ್ಕುಮಾರ್ ಹೇಳೋದೇನು:
ನಾನು ಬಸಮ್ಮ ಪ್ರೀತಿಸುತ್ತಿದ್ದವು. ಆದರೆ ಬಸಮ್ಮನ ಮದುವೆ ಬಳಿಕ ನಾನು ಅವಳನ್ನು ಮರೆತಿದ್ದೇನೆ. ನನಗೆ ಮದುವೆ ಫಿಕ್ಸ್ ಆಗಿರುವುದಕ್ಕೆ ಈ ರೀತಿ ನಾಟಕವಾಡುತ್ತಿದ್ದಾಳೆ. ಮದುವೆ ಆಗುವುದಿದ್ದರೆ ಅವತ್ತೇ ಆಗುತ್ತಿದ್ದೆ. ನನಗೆ ಬೇರೆ ಕಡೆ ಮದುವೆ ಫಿಕ್ಸ್ ಆಗಿದೆ. ನಾನು ಅವಳಿಗೆ ಮೆಸೇಜ್, ಫೋನ್ ಏನೂ ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ. ಹೀಗಾಗಿ ನನಗು ಯುವತಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾನೆ.