ಬೆಂಗಳೂರು: ಫೇಸ್ಬುಕ್ನಿಂದ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಈಗ ವಾಟ್ಸಾಪ್ ಚಾಟಿಂಗ್ ಮೂಲಕ ದೂರವಾಗಿದ್ದಾರೆ. ಪತಿಯ ವಾಟ್ಸಾಪ್ ಸಂದೇಶಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಛತ್ತೀಸ್ಗಢದ ರಾಯಪುರ ಮೂಲದ ಯುವತಿಗೆ ಬೆಂಗಳೂರು ಮೂಲದ ಯುವಕನೊಂದಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿತ್ತು. ಫೇಸ್ಬುಕ್ ಮೂಲಕ ಪರಿಚಯವಾದ ಜೋಡಿ ಪ್ರೀತಿಸಿ 2016ರ ಜನವರಿ 22 ರಂದು ಪುಣೆಯ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಅದನ್ನು ಲೆಕ್ಕಿಸದೇ ಮದುವೆ ಆಗಿದ್ದರು. ಮದುವೆ ನಂತರ ಯುವಕ ಪೊಷಕರನ್ನು ಒಪ್ಪಿಸಿ ಕರೆದುಕೊಂಡು ಹೋಗುತ್ತೇನೆಂದು ತಿಳಿಸಿ ಯುವತಿಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದ.
ಹೀಗೆ ಒಂದೂವರೆ ವರ್ಷ ಯುವಕ ರಾಯಪುರದ ಪತ್ನಿಯ ಮನೆಗೆ ಹೋಗಿ ಬರುವುದನ್ನು ಮಾಡುತ್ತಿದ್ದನು. ನಂತರ ಕಳೆದ ನವೆಂಬರ್ ನಲ್ಲಿ ನಾರಾಯಣಪುರದಲ್ಲಿ ಮನೆ ಮಾಡಿ ಪತ್ನಿಯನ್ನು ಕರೆಸಿಕೊಂಡಿದ್ದ. ಈ ವೇಳೆ ಯುವತಿಯ ಕಡೆಯವರು ಬೆಂಗಳೂರಲ್ಲಿ ಹೇಗಿದ್ದೀಯಾ? ಗಂಡ ಚೆನ್ನಾಗಿ ನೋಡಿಕೊಳ್ತಿದ್ದಾನಾ ಎಂದು ಯುವತಿ ಮನೆಯವರು ಸಂದೇಶ ಕಳುಹಿಸಿದ್ದಾರೆ. ಬಳಿಕ ಯುವಕ ಇದಕ್ಕೆ ಪತ್ನಿಯ ಶೀಲವನ್ನೇ ಶಂಕಿಸಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ನೀನು ನಡತೆಗೆಟ್ವಳು ನಿನಗೆ ಬೇರೊಂದು ಅಕ್ರಮ ಸಂಬಂಧವಿದೆ. ವಿಚ್ಚೇಧನ ಕೊಡು ಎಂದು ಪೀಡಿಸಲಾರಂಭಿಸಿದ್ದಾನೆ.
ಯುವಕ ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಹಲ್ಲೆ ಮಾಡಿ ಹಿಂಸೆ ಮಾಡಲು ಶುರುಮಾಡಿದ. ಗಂಡನ ಹಿಂಸೆ ತಾಳಲಾರದೇ ಯುವತಿ ತನ್ನ ಹುಟ್ಟೂರಿಗೆ ವಾಪಸ್ ಹೋಗಿ ರಾಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣ ಈಗ ಛತ್ತಿಸ್ಗಢದಿಂದ ಬೆಂಗಳೂರಿಗೆ ವರ್ಗಾವಣೆ ಆಗಿದ್ದು, ವರದಕ್ಷಿಣೆ ಕಿರುಕುಳ ಹಾಗೂ ಜೀವ ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯಿಂದ ಮತ್ತಷ್ಟು ಮಾಹಿತಿ ಪಡೆದಿದ್ದು, ಆರೋಪಿಗಾಗಿ ಮಹದೇವಪುರ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv