ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಮದುವೆಯಾದ ಏಳು ತಿಂಗಳಲ್ಲೇ 5 ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸೌಮ್ಯ (18) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ದತ್ತಾತ್ರೇಯ ನಗರದ ಶೈಕ್ಪೇಟೆಯ ಪ್ರಭಾಕರ್ ಮತ್ತು ಶೇಷಮ್ಮ ಅವರ ಮಗಳು ಸೌಮ್ಯಗೆ ಕಳೆದ ಏಳು ತಿಂಗಳ ಹಿಂದೆ ತಮ್ಮ ಹತ್ತಿರದ ಸಂಬಂಧಿ ಫಿಲ್ಮ್ ನಗರದ ಶಿವಕುಮಾರ್ ಜೊತೆ ವಿವಾಹವಾಗಿತ್ತು. ಮದುವೆಯಾದ ನಂತರ ಸೌಮ್ಯ ಪತಿ ಶಿವಕುಮಾರ್, ಅತ್ತೆ ರುಕ್ಕಮ್ಮ ಮತ್ತು ಚಿಕ್ಕಮ್ಮ ಭೂಶಿ ಜೊತೆ ವಾಸಿಸುತ್ತಿದ್ದಳು. ಈ ವೇಳೆ ಸೌಮ್ಯಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.
ಸೌಮ್ಯ ಐದು ತಿಂಗಳ ಗರ್ಭಿಣಿಯಾಗಿದ್ದಳು. ಆದರೂ ಮನೆಯವರು ಕರುಣೆಯಿಲ್ಲದೆ ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಲಾಗದೇ ಒಂದು ತಿಂಗಳಿನಿಂದ ಸೌಮ್ಯ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಆದರೆ ಸೌಮ್ಯ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯವರು ಬಂದು ಸೌಮ್ಯಗಾಗಿ ಹುಡುಕಾಡಿದ್ದಾರೆ. ಕೊನೆಗೆ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಗಾಬರಿಯಾದ ಕುಟುಂಬಸ್ಥರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿಯೇ ಸೌಮ್ಯ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ನಮ್ಮ ಮಗಳಿಗೆ ಹೆಚ್ಚಾಗಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಷಕರು ದೂರು ನೀಡಿದ ಆಧಾರದ ಮೇರೆಗೆ ಗೋಲ್ಕೊಂಡಾ ಇನ್ಸ್ಪೆಕ್ಟರ್ ಚಂದ್ರಶೇಖರ್ ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇತ್ತ ಮದುವೆಯಾದ ಏಳು ತಿಂಗಳಲ್ಲೇ ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.