ಮಡಿಕೇರಿ: ಕೊಡಗಿನಲ್ಲಿ ಮೂರು ದಶಕಗಳಿಂದ ಬಿಜೆಪಿಯ ಶಾಸಕರು ಇದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಆದರೆ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳನ್ನು ಎದುರಿಸಿ ಕುರಿಗಳಂತೆ ಕರೆತಂದು ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ್ದಾರೆ. ಗೆದ್ದಿರುವ ಸುಜಾ ಕುಶಾಲಪ್ಪ ಅವರು ಇನ್ನಾದರೂ ಪಂಚಾಯಿತಿ ಸದಸ್ಯರನ್ನು ಗೌರವದಿಂದ ನಡೆಸಿಕೊಳ್ಳಲಿ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ವಾಗ್ದಾಳಿ ನಡೆಸಿದರು.
ಚುನಾವಣೆ ಫಲಿತಾಂಶ ಘೋಷಣೆ ಆಗಿ ಸೋಲು ಅನುಭವಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮತಗಳು 400 ಮತಗಳಿದ್ದರೂ, ನಾವು 602 ಮತಗಳನ್ನು ಪಡೆದಿದ್ದೇವೆ. ಬಿಜೆಪಿಗೆ 800 ಮತಗಳಿದ್ದವು ಅವರ 200 ಮತಗಳು ಕಾಂಗ್ರೆಸ್ಸಿಗೆ ಬಂದಿವೆ ಎಂದರೆ ಅದು ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಅಂತಲೇ ಅರ್ಥ. ಚುನಾವಣೆ ಹತ್ತಿರ ಬಂದಾಗ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಾಗಿರುವ ಮತದಾರರನ್ನು ಕುರಿಗಳಂತೆ ರೆಸಾರ್ಟ್ಗಳಲ್ಲಿ ಕೂಡಿ ಹಾಕಿ ಬೆದರಿಸಿ ಮತ ಹಾಕಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮತ್ತೆ ಅರಳಿದ ಬಿಜೆಪಿ
ಮತ ಎಣಿಕೆ ವೇಳೆ ಮೂರ್ನಾಲ್ಕು ಟೇಬಲ್ ನಲ್ಲಿ ನನಗೆ ಹೆಚ್ಚು ಮತಗಳು ಬಂದವು. ಆಗ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ನಡುಗುತ್ತಿದ್ದರು. ಅಂತು ನಾವು ಈ ಚುನಾವಣೆಯಲ್ಲಿ ಬಿಜೆಪಿಯನ್ನು ನಡುಗಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಿ ನಮ್ಮ ಗೆಲುವಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ಗೆಲುವು ಸೋಲು ಎನ್ನೋದು ಇದ್ದದ್ದೇ. ಇದರಿಂದ ನನಗೇನು ಬೇಸರವಿಲ್ಲ. 37 ವರ್ಷದ ನನಗೆ ಟಿಕೆಟ್ ನೀಡಿದ್ದಕ್ಕೆ ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಂದನೆ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ