ಮಂಗಳೂರು: ಕೊರೊನಾ ವೈರಸ್ ಮಹಾಮಾರಿಗೆ ಜನ ಕಂಗೆಟ್ಟಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾನಿಯೊಬ್ಬರು ನೆರವಾಗಲು ಮುಂದೆ ಬಂದಿದ್ದಾರೆ.
ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಯ ಮಾಲಕ, ಉದ್ಯಮಿ ಪ್ರಕಾಶ್ ಶೆಟ್ಟಿ ಬರೋಬ್ಬರಿ ಒಂದು ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್ ವಿತರಣೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಡ ಜನರಿಗೆ ಈ ಕಿಟ್ ವಿತರಣೆಯಾಗಲಿದೆ. ಒಂದೊಂದು ಕಿಟ್ನಲ್ಲಿ 10ಕೆಜಿ ಅಕ್ಕಿ, 2ಕೆಜಿ ಸಕ್ಕರೆ, 1ಕೆಜಿ ಬೇಳೆ, 1/2ಕೆಜಿ ಚಾಪುಡಿ, 1/2ಕೆಜಿ ರಸಂ ಪುಡಿ ಒಳಗೊಂಡಿದೆ.
ಒಟ್ಟು 10 ಸಾವಿರ ಕಿಟ್ಗಳು ಇದ್ದು ಎರಡು ಜಿಲ್ಲೆಗೆ ತಲಾ 5 ಸಾವಿರ ಕಿಟ್ ಹಂಚಲಾಗಿದೆ. ಎರಡು ಜಿಲ್ಲೆಯ ಎಲ್ಲಾ ಶಾಸಕರ ಮುಖಾಂತರ ಇದು ಬಡ ಜನರಿಗೆ ತಲುಪಲಿದೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಕಿಟ್ ವಿತರಣೆಗೆ ಚಾಲನೆ ನೀಡಿದರು. ಪ್ರಕಾಶ್ ಶೆಟ್ಟಿ ಅವರ ಈ ಕಾರ್ಯ ಇತರ ದಾನಿಗಳಿಗೂ ಪ್ರೇರಣೆಯಾಗಲಿ ಎಂದು ಪಾಲಿಕೆ ಆಯುಕ್ತರು ಇದೇ ಸಂದರ್ಭ ಹೇಳಿದರು.