ನೆಲಮಂಗಲ: ಪಬ್ಲಿಕ್ ಟಿವಿಯಲ್ಲಿ ತನ್ನ ಕಷ್ಟ ತೋಡಿಕೊಂಡಿದ್ದ ಮಹಿಳೆಗೆ ಮಾದನಾಯಕನಹಳ್ಳಿ ಸ್ಥಳೀಯ ನಿವಾಸಿಗಳು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು. ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯದ ನೆಲಮಂಗಲದ ಮಾದನಾಯಕನಹಳ್ಳಿ ನಿವಾಸಿ ಮಹೇಶ್ವರಿ ಕರೆ ಮಾಡಿ ತನ್ನ ಕಷ್ಟ ಹೇಳಿಕೊಂಡಿದ್ದರು. ಇದೀಗ ಮಹಿಳೆಗೆ ಮಾದನಾಯಕನಹಳ್ಳಿ ನಿವಾಸಿಗಳು ನೆರವು ನೀಡಿದ್ದಾರೆ.
ಮಾದನಾಯಕನಹಳ್ಳಿಯಲ್ಲಿ ನೆಲೆಸಿರುವ ಮಹೇಶ್ವರಿಗೆ ಗಂಡ ಹಾಗೂ ಮಗನಿದ್ದು ಇವರಿಂದ ದೂರವಾಗಿದ್ದಾರೆ. ಹೀಗಿರುವಾಗ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಹಾಗೂ ದಿನಸಿ ಪದಾರ್ಥಗಳು ಇಲ್ಲದೆ ಪರದಾಡುವಂತಾಗಿತ್ತು. ಈ ಸಂಬಂಧ ಮಹೇಶ್ವರಿ ಅವರು ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದರು. ಇಂದು ಮಾದನಾಯಕನಹಳ್ಳಿಯ, ಡಿವಿಜಿ ಮಂಜುನಾಥ್ ಹಾಗೂ ಸ್ನೇಹಿತರು ಆ ಮಹಿಳೆಯ ಮನೆಗೆ ತೆರಳಿ ಸಿಲಿಂಡರ್ ಚೆಕ್ ಮಾಡಿ, ಗ್ಯಾಸ್ ಕನೆಕ್ಷನ್ ಹಾಗೂ 15 ದಿನಕ್ಕೆ ಬೇಕಾಗುವಂತಹ ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪಬ್ಲಿಕ್ ಟಿವಿಯ ಸಹಕಾರದಕ್ಕೆ ಕಂಬನಿ ಮಿಡಿದ ಮಹೇಶ್ವರಿ ಸಹಾಯಕ್ಕೆ ಸ್ಪಂದಿಸಿದ ಸ್ಥಳೀಯರಿಗೂ ಅಭಿನಂದನೆ ಸಲ್ಲಿಸಿ ಕಷ್ಟದ ಸಮಯದಲ್ಲಿ ನೆರವಾದವರಿಗೆ ನಮನ ಸಲ್ಲಿಸಿದ್ದಾರೆ.