-ಮನೆಯ ಬಡತನ ನೋಡಿ ಉದ್ಯೋಗ ಭರವಸೆ
ಮೈಸೂರು: ಪಡಿತರ ಕೊಡಲು ಹೋಗಿ ಬಡತನ ನೋಡಿ ಮರುಗಿದ ಉದ್ಯಮಿಯೊಬ್ಬರು ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯಕ್ಕೆ ಕರೆ ಮಾಡಿದ್ದ ಮೈಸೂರಿನ ಮಂಜುಳಾ ಪಡಿತರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಿಳೆ ಮನವಿಗೆ ಸ್ಪಂದಿಸಿದ ಉದ್ಯಮಿ ಎಸ್.ಎನ್. ಶಿವಪ್ರಕಾಶ್ ಖುದ್ದಾಗಿ ಅವರ ಮನೆಗೆ ಹೋಗಿ ಪಡಿತರದ ಕಿಟ್ ನೀಡಲು ಹೋಗಿದ್ದರು.
ಪಡಿತರ ನೀಡಿದ ಬಳಿಕ ಮನೆಯ ಸದಸ್ಯರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ಬಡತನವನ್ನು ನೋಡಲಾಗದೇ ಮಂಜುಳಾರ ಹಿರಿಯ ಪುತ್ರಿಗೆ ತಮ್ಮ ಕಚೇರಿಯಲ್ಲಿಯೇ ಕೆಲಸ ನೀಡುವ ಭರವಸೆ ನೀಡಿದ್ದಾರೆ. ಮುಂದೆ ಏನೇ ಸಹಾಯ ಬೇಕಿದ್ದರು ತಮ್ಮನ್ನು ಸಂಪರ್ಕಿಸುವಂತೆ ಮೊಬೈಲ್ ನಂಬರ್ ನೀಡಿ ಬಂದಿದ್ದಾರೆ.
ಎರಡು ದಿನಗಳ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯಕ್ಕೆ ಕರೆ ಮಾಡಿ ದಿನಸಿಯ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಇಂದು ನಗರದ ಉದ್ಯಮಿಯಾಗಿರುವ ಶಿವಪ್ರಕಾಶ್ ಖುದ್ದಾಗಿ ಮನೆಗೆ ಬಂದು ರೇಷನ್ ನೀಡಿದ್ದಾರೆ ಎಂದು ಮಂಜುಳಾ ಹೇಳಿದ್ದಾರೆ.
ಪಡಿತರ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್.ಎನ್.ಶಿವಪ್ರಕಾಶ್, ಕಳೆದ 20 ದಿನಗಳಿಂದ ದಿನಸಿ ಮತ್ತು ತರಕಾರಿ ಹಂಚುತ್ತಿದ್ದೇವೆ. ಅವಶ್ಯಕತೆ ಇಲ್ಲದವರು ಸಹ ಬಂದು ಪಡಿತರ ಪಡೆದುಕೊಂಡು ಹೋಗುತ್ತಾರೆ. ಪಬ್ಲಿಕ್ ಟಿವಿಗೆ ಕರೆ ಮಾಡುವ ಜನರಿಗೆ ನೂರಕ್ಕೆ ನೂರರಷ್ಟು ಅವಶ್ಯಕತೆ ಇರೋ ಜನರು. ಪಬ್ಲಿಕ್ ಟಿವಿ ಮೂಲಕ ನಿರಾಶ್ರಿತರು ಎಲ್ಲಿದ್ದಾರೆಂಬ ವಿಷಯ ನಮಗೂ ತಿಳಿಯುತ್ತದೆ ಎಂದರು.