-ಆಷಾಢದಲ್ಲಿ ಬಿಜೆಪಿ ಸರ್ಕಾರ ರಚೆನೆಯಾಗಬೇಕು ಅನ್ನೋದು ನಮ್ಮ ಆಸೆ
ಮಂಡ್ಯ: ನಿಂಬೆಹಣ್ಣು ರೇವಣ್ಣ (ಸಚಿವ ಹೆಚ್.ಡಿ.ರೇವಣ್ಣ) ಈಗ ಮೈತ್ರಿ ಸರ್ಕಾರದ ಬಗ್ಗೆ ಏನ್ ಭವಿಷ್ಯ ನುಡಿತಾರ ನೋಡಬೇಕಿದೆ ಎಂದು ಬಿಜೆಪಿ ಮುಖಂಡ ಆರ್ ಆಶೋಕ್ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ ಪತನದತ್ತ ಸಾಗುತ್ತಿದೆ. ಸರ್ಕಾರದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಕುಮಾರಸ್ವಾಮಿ ಆಡಳಿತ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಿದ್ದಾರೆ.
ಸರ್ಕಾರದಲ್ಲಿ ಜೆಡಿಎಸ್ ಶಾಸಕರಿಗೊಂದು ಕಾಂಗ್ರೆಸ್ ಶಾಸಕರಿಗೊಂದು ತಾರತಮ್ಯ ಮಾಡಲಾಗಿದ್ದು, ಕೈ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಆನಂದ್ ಸಿಂಗ್ ರಾಜೀನಾಮೆ ಸರ್ಕಾರದ ಪತನಕೆ ನಾಂದಿಯಾಗಿದೆ. ಆನಂದ್ ಸಿಂಗ್ ಹಿಂದೆ ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಬಿಜೆಪಿ ಆಪರೇಷನ್ ಕಮಲ ಮಾಡಲ್ಲ ಸರ್ಕಾರ ತಾನಾಗಿಯೇ ಬೀಳಲಿದೆ. ಸಿಎಂ ಮಗ ಸೋತರೆ ಮುಖ್ಯಮಂತ್ರಿ ಸೋತ ಹಾಗೆ, ಲೋಕಸಭೆ ಸೋಲಿನ ಬಳಿಕ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಆದರೆ ಅವರು ಕುರ್ಚಿಗೆ ಅಂಟಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಧ್ಯಂತರ ಚುನಾವಣೆಗೆ ಹೋಗಲ್ಲ. ನಾವು ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದು ಹೇಳಿದ್ದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ತಿರುಗೇಟು ಕೊಟ್ಟ ಆರ್.ಅಶೋಕ್, ಅವರ ಅಣ್ಣನನ್ನೇ ಅವರ ಕೈಯಲ್ಲಿ ಹಿಡಿದುಕೊಳ್ಳಲು ಆಗದಿದ್ದ ಮೇಲೆ ರಿವರ್ಸ್ ಆಪರೇಷನ್ ಹೇಗೆ ಮಾಡುತ್ತಾರೆ?.್ತ ಈ ಸರ್ಕಾರ ಬಿದ್ದು ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಸಿದ್ದಾರೆ ಎಂದು ಹೇಳಿದರು.
ಮಧ್ಯಂತರ ಚುನಾವಣೆಯ ಅವಶ್ಯಕತೆ ಇಲ್ಲ, ನಾವು 105 ಜನ ಇದ್ದೀವಿ. ನಮಗೆ ಸರ್ಕಾರ ರಚಿಸುವ ನೈತಿಕತೆ ಇದೆ. ಯಾರ ಯಾರು ರಾಜೀನಾಮೆ ನೀಡುತ್ತಾರೆ ಅನ್ನೋದನ್ನು ಇನ್ನೊಂದು ವಾರ ಕಾದು ನೋಡಿ. ಸರ್ಕಾರದ ಸುಳ್ಳು ಭರವಸೆಗಳಿಂದ ಕರ್ನಾಟಕದ ಜನ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜೀನಾಮೆ ಪರ್ವ ಶುರುವಾಗಲಿದ್ದು, ಏಣಿಕೆ ಮಾಡದಷ್ಟು ಆಶ್ಚರ್ಯಕರವಾಗಿ ಒಂದಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದರು.