– ಮಂಡ್ಯಕ್ಕೆ ಬಂದ್ರೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ
ಮಂಡ್ಯ: ಮಂಡ್ಯದವರು (Mandya) ಛತ್ರಿಗಳು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್ಗೆ ಅಧಿಕಾರ ಸಿಕ್ಕಿದೆ. 7 ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು ಹೋಯ್ತಾ ಡಿಸಿಎಂ ಅವರೇ? ಮಂಡ್ಯದವರು ಸಿಎಂ ಆಗಿದ್ದಾಗ ಅವರ ಕಾಲಿಗೆ ಬಿದ್ದು ಬೆಳೆದವರು ನೀವು. ಇಂತಹ ದುರಹಂಕಾರಿಗೆ ಸರಿಯಾದ ಬುದ್ಧಿ ಕಲಿಸಬೇಕು. ಅತೀ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಜನರಿಗೆ ಅವಮಾನ ಮಾಡಿದ್ದೀರಿ. ಈ ಮೂಲಕ ಮಂಡ್ಯ ಜನತೆಗೆ ಯುಗಾದಿ ಬೋನಸ್ ಕೊಟ್ಟಿದ್ದೀರಿ ಎಂದು ಸಾಲು ಸಾಲು ಪೋಸ್ಟ್ ಹಾಕಿ ಜನ ಆಕ್ರೋಶ ಹೊರಹಾಕಿದ್ದಾರೆ.
ಡಿ.ಕೆ ಶಿವಕುಮಾರ್ ಮಂಡ್ಯ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೇ ಮಂಡ್ಯಕ್ಕೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಅವರ ಹೇಳಿಕೆ ಖಂಡಿಸದೇ ಮಂಡ್ಯ ಜನರ ಪರ ನಿಲ್ಲದ ಕೈ ಶಾಸಕರು ಛತ್ರಿಗಳು ಎಂದು ಕಿಡಿಕಾರಿದ್ದಾರೆ.
ಡಿಕೆಶಿ ಹೇಳಿದ್ದೇನು?
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ.17ರಂದು ನಡೆದ ಯೂತ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡಿದ್ದರು. ಈ ವೇಳೆ ಮಂಡ್ಯದವ್ರು ಛತ್ರಿಗಳು ಎಂಬ ಪದವನ್ನು ಅವರು ಬಳಸಿದ್ದರು.
ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡುತ್ತಿದ್ದಾಗ ಜನ ಫಲಕ ಹಾಗೂ ಭಾವುಟಗಳನ್ನು ಪ್ರದರ್ಶಿಸಿದ್ದರು. ಈ ವೇಳೆ ಸಿಟ್ಟಾದ ಅವರು, ಅದೆಲ್ಲ ಕೆಳಗಿಳಿಸಿ, ನಿಮ್ಮ ಮಂಡ್ಯದವ್ರ ಛತ್ರಿಗಳ ಆಟ ನಿಲ್ಲಿಸಿ ಎಂದು ಗದರಿಸಿದ್ದರು.