ಮಂಡ್ಯ: ನಟ ದರ್ಶನ್ ಅವರು ಕಳೆದ ದಿನ ಸುಮಲತಾ ಅಂಬರೀಶ್ ಪರವಾಗಿ ಮಳವಳ್ಳಿ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ನಟ ದರ್ಶನ್ ಎತ್ತಿನ ಗಾಡಿಯ ಮೇಲೆ ಸವಾರಿ ಮಾಡಿದ್ದಾರೆ.
ನಟ ದರ್ಶನ್ ಮಳವಳ್ಳಿಯ ಕಂದೇಗಾಲದಲ್ಲಿ ಪ್ರಚಾರ ಮಾಡುವ ವೇಳೆ ಎತ್ತಿನ ಗಾಡಿ ಓಡಿಸಿದ್ದಾರೆ. ಕಂದೇಗಾಲದಲ್ಲಿ ದರ್ಶನ್ ಅಭಿಮಾನಿಗಳು ದಾರಿಯ ಮಧ್ಯೆಯೇ ಎತ್ತಿನ ಗಾಡಿ ಸಿದ್ಧಪಡಿಸಿ ಅವರಿಗಾಗಿ ಕಾದು ಕುಳಿತ್ತಿದ್ದರು. ದರ್ಶನ್ ಅವರು ಪ್ರಚಾರಕ್ಕೆಂದು ಕಂದೇಗಾಲ ಕಡೆ ಬರುತ್ತಿದ್ದಂತೆ ಅವರ ಅಭಿಮಾನಿಗಳು ಎತ್ತಿನ ಗಾಡಿ ಓಡಿಸುವಂತೆ ಒತ್ತಾಯ ಮಾಡಿದ್ದಾರೆ.
ಕೊನೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ದರ್ಶನ್ ಅವರು ಕಬ್ಬು ಸಾಗಿಸುವ ಎತ್ತಿನ ಗಾಡಿ ಹತ್ತಿದ್ದಾರೆ. ಬಳಿಕ ಜೋಡೆತ್ತು ಗಾಡಿ ಮೇಲೆ ಹಗ್ಗ ಹಿಡಿದು ನಿಂತು ಹೊಯ್.. ಹೊಯ್.. ಎಂದು ಎತ್ತಿನ ಗಾಡಿ ಸವಾರಿ ಮಾಡಿದ್ದಾರೆ.
ದರ್ಶನ್ ಅವರಿಗಾಗಿ ಅಭಿಮಾನಿಗಳು ಎತ್ತಿನ ಗಾಡಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ್ದರು. ಗಾಡಿಗೆ ಕರ್ನಾಟಕದ ಬಾವುಟ ಹಾಕಿದ್ದು, ಜೊತೆಗೆ ಬಾಳೆದಿಂಡು ಕಟ್ಟಿದ್ದರು. ಅಷ್ಟೇ ಅಲ್ಲದೇ ಜೋಡೆತ್ತುಗಳ ಬೆನ್ನಿನ ಮೇಲೆ ರೆಬೆಲ್ ಸ್ಟಾರ್ ಅಂಬಿ ಮತ್ತು ಡಿ ಬಾಸ್ ಎಂದು ಬರೆಯಲಾಗಿತ್ತು.