ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

Public TV
2 Min Read
preetham gowda narayana gowda

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ (Lok Sabha Election) ಚುನಾವಣೆ ರಾಜಕೀಯ ಗರಿಗೆದರಿದೆ. ಇದರ ಮಧ್ಯೆ ಜೆಡಿಎಸ್-ಬಿಜೆಪಿ (BJP-JDS) ದೋಸ್ತಿಗಳ ಮಧ್ಯೆ ಸೀಟು ಹಂಚಿಕೆ ಗೊಂದಲ ಹೆಚ್ಚಾಗಿದೆ.

ಜೆಡಿಎಸ್ ಕಣ್ಣಿಟ್ಟ ಕ್ಷೇತ್ರಗಳನ್ನು ಬಿಟ್ಟುಕೊಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ (Mandya), ಹಾಸನ (Hassan) ಕ್ಷೇತ್ರಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಂತೆ ಸ್ಥಳೀಯ ಕಮಲ ಮುಖಂಡರಿಂದ ಆಗ್ರಹ ವ್ಯಕ್ತವಾಗಿದೆ. ಇದನ್ನೂ ಓದಿ: ಡಿಕೆಸು ಪ್ರತ್ಯೇಕ ದೇಶ ಹೇಳಿಕೆ; ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ – ನಿವಾಸ ಮುತ್ತಿಗೆಗೆ ಯತ್ನಿಸಿದವರ ಮೇಲೆ ಲಾಠಿ ಪ್ರಹಾರ

BJP JDS Modi Amit Shah Kumaraswamy

ಹಾಸನ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಂ ಗೌಡ ಒತ್ತಾಯಿಸಿದ್ದಾರೆ. ಇತ್ತ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಮಾಜಿ ಸಚಿವ ನಾರಾಯಣ ಗೌಡರಿಂದ ಆಗ್ರಹ ಕೇಳಿಬಂದಿದೆ.

ಹಾಸನ ಬಳಿಕ ಮಂಡ್ಯದಲ್ಲೂ ಕ್ಷೇತ್ರ ಬಿಟ್ಟುಕೊಡದಂತೆ ಪ್ರೀತಂ ಗೌಡ ಗುಡುಗಿದ್ದಾರೆ. ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿಯ ಪಕ್ಷ ಸಂಘಟನೆ ಬಲಗೊಂಡಿದ್ದು, ಪಕ್ಷದಿಂದಲೇ ಅಭ್ಯರ್ಥಿ ಹಾಕಲು ಒತ್ತಡ ವ್ಯಕ್ತವಾಗಿದೆ. ಇದನ್ನೂ ಓದಿ: ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

ಹಾಸನದಲ್ಲಿ ಜೆಡಿಎಸ್ ಸಂಸದರು ಇದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್ ಕೇಳುತ್ತಿದೆ. ಹಾಗಾದರೆ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅವರು ಸಂಸದರು, ಮಂಡ್ಯ ಬಿಟ್ಟುಕೊಡಲಿ ಎಂದು ಪ್ರೀತಂ ಗೌಡ ಠಕ್ಕರ್‌ ಕೊಟ್ಟಿದ್ದಾರೆ.

BJP JDS

ಕ್ಷೇತ್ರ ಉಳಿಸಿಕೊಳ್ಳಿ ಎನ್ನುವುದು ಎರಡೂ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಒತ್ತಾಯ. ಸೀಟು ಹಂಚಿಕೆ ಅಂತಿಮವಾಗುವ ಮುನ್ನವೇ ಕ್ಷೇತ್ರಗಳಲ್ಲಿ ಜೆಡಿಎಸ್ ಚುನಾವಣಾ ಸಿದ್ಧತೆಗೂ ಆಕ್ಷೇಪ ವ್ಯಕ್ತವಾಗಿದೆ. ಮಂಡ್ಯ, ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಕೊಡಲು ಸ್ಥಳೀಯ ಬಿಜೆಪಿ‌ ಮುಖಂಡರು, ಕಾರ್ಯಕರ್ತರು ವಿರೋಧಿಸಿದ್ದಾರೆ. ಸ್ಥಳೀಯರ ವಿರೋಧವು ಬಿಜೆಪಿಗೆ ತಲೆನೋವಾಗಿದೆ.

ಎರಡೂ ಲೋಕಸಭೆ ಕ್ಷೇತ್ರಗಳ ವಿರೋಧ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವ ಆತಂಕದಲ್ಲಿ ಕಮಲ ನಾಯಕರು ಇದ್ದಾರೆ. ಹೈಕಮಾಂಡ್ ಅಂಗಳಕ್ಕೆ ರಿಪೋರ್ಟ್ ಕಳಿಸಲು ಕಮಲ ಪಡೆ ಮುಂದಾಗಿದೆ. ಕ್ಷೇತ್ರ ಹಂಚಿಕೆ ಜಟಾಪಟಿ ಹೈಕಮಾಂಡ್ ಕೋರ್ಟಿನಲ್ಲಿ ಬೇಗ ಇತ್ಯರ್ಥ ಮಾಡಿ ಎಂದು ಮನವಿ ಮಾಡಲು ಮುಂದಾಗಿದ್ದಾರೆ. ಇದೇ ತಿಂಗಳ ಎರಡನೇ ವಾರದಲ್ಲಿ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

ಅಮಿತ್ ಶಾ ಸಮ್ಮುಖದಲ್ಲೂ ಕ್ಷೇತ್ರ ಜಟಾಪಟಿ ಪ್ರಸ್ತಾಪ ಮಾಡಲು ಪ್ಲ್ಯಾನ್‌ ನಡೆದಿದೆ. ಸದ್ಯಕ್ಕೆ ಈ ವಿಚಾರದಲ್ಲಿ ಹೆಚ್ಚಿಗೆ ಮೂಗು ತೂರಿಸದಿರಲು ರಾಜ್ಯ ಬಿಜೆಪಿ ನಾಯಕರು ನಿಶ್ಚಯಿಸಿದ್ದಾರೆ. ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠರ‌ ತೀರ್ಮಾನಕ್ಕೆ ಬಿಡಲು ರಾಜ್ಯ ಬಿಜೆಪಿ ಘಟಕ ಮುಂದಾಗಿದೆ. ಸದ್ಯ ಪರಿಸ್ಥಿತಿ ತಿಳಿ ಮಾಡುವ ಪ್ರಯತ್ನ ಅಥವಾ ಕಾರ್ಯಕರ್ತರ ಮನವರಿಕೆಗೂ ಕೈಹಾಕಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೈಕಮಾಂಡ್‌ನಿಂದಲೇ ತೀರ್ಮಾನ ಬರಲಿ ಎಂದು ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

Share This Article