ಮಂಡ್ಯ: ಸಾಲಮನ್ನಾದ ಋಣಮುಕ್ತ ಪತ್ರದಿಂದ ಯಾವ ಪ್ರಯೋಜನವೂ ಇಲ್ಲ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ಜಿಲ್ಲೆಯ ನಾಗಮಂಗಲ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ಹನುಮಂತಯ್ಯ ಅವರ ಮನೆಗೆ ಭೇಟಿ ನೀಡಿದ್ದ ಚಲುವರಾಯಸ್ವಾಮಿ ಅವರು ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಂತರ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ ಅವರು ಲಕ್ಷಾಂತರ ಜನರ ಜೀವನದ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ರೈತ ಹನುಮಂತಯ್ಯ ಅವರು ಬ್ಯಾಂಕಿಗೆ ಹೋಗಿ ಸಾಲಮನ್ನಾದ ಬಗ್ಗೆ ಕೇಳಿದ್ದಾರೆ. ಸಿಬ್ಬಂದಿ ಯಾವ ಸಾಲವೂ ಮನ್ನಾವಾಗಿಲ್ಲ ಎಂದು ಹೇಳಿದ್ದಾರೆ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇದನ್ನೆಲ್ಲಾ ಯೋಚಿಸಬೇಕು. ಯಾವುದೋ ಒಂದು ಪ್ರಕರಣದಲ್ಲಿ ಒಬ್ಬರಿಗೆ ಸಹಾಯ ಮಾಡಿದರೆ ಒಬ್ಬರ ಜೀವ ಉಳಿಸಬಹುದು. ಆದರೆ ರಾಜ್ಯದಲ್ಲಿ ಲಕ್ಷಾಂತರ ರೈತರು ಸಮಸ್ಯೆಯಲ್ಲಿದ್ದಾರೆ. ರಾಜ್ಯದ ಎಲ್ಲ ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
ನೀವು ಕೊಡುವ ಋಣಮುಕ್ತ ಪತ್ರದಿಂದ ಬ್ಯಾಂಕ್ನವರು ಸಾಲ ಮನ್ನಾ ಮಾಡಲ್ಲ. ಋಣಮುಕ್ತ ಪತ್ರ ನೀವು ಕೊಡುವುದನ್ನು ನಿಲ್ಲಿಸಿ. ರೈತರಿಗೆ ಋಣಮುಕ್ತ ಪತ್ರವನ್ನು ಬ್ಯಾಂಕ್ ನೀಡಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಬಾರದು. ಬ್ಯಾಂಕಿನವರು ಕೊಟ್ಟರೆ ಆ ಪತ್ರಕ್ಕೆ ಮೌಲ್ಯವಿರುತ್ತದೆ. ಆದ್ದರಿಂದ ಬ್ಯಾಂಕ್ನವರಿಂದ ಋಣಮುಕ್ತ ಪತ್ರ ಕೊಡಿಸಿ ಆಗ ಮಾತ್ರ ಅದು ಊರ್ಜಿತ ಆಗುತ್ತದೆ ಎಂದು ತಿಳಿಸಿದರು.
ಸಾಲಮನ್ನಾ ಘೋಷಣೆ ಮಾಡುವಾಗ ನೇರವಾಗಿ ಕೋ-ಆಪರೇಟೀವ್ ಬ್ಯಾಂಕ್ ಸಾಲ ಮಾತ್ರ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರೆ ಈಗ ಈ ರೀತಿಯ ಪರಿಸ್ಥಿತಿ ಎದುರಿಸಬೇಕಾಗಿರಲಿಲ್ಲ. ಎಲ್ಲಾ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರಿಂದಲೇ ರೈತರು ಇಂದಲ್ಲ ನಾಳೆ ಸಾಲಮನ್ನಾ ಆಗುತ್ತೆ ಎನ್ನುವ ಮನೋಭಾವದಲ್ಲಿದ್ದಾರೆ. ಮಾಡುವುದಾದರೆ ಪೂರ್ಣ ಪ್ರಮಾಣದಲ್ಲಿ ಸಾಲಮನ್ನಾ ಮಾಡಿ ಕ್ಲೋಸ್ ಮಾಡಿ. ಇಲ್ಲದಿದ್ದರೆ ಯಾವ ಸಾಲ ಮನ್ನಾ ಮಾಡುತ್ತೀರಾ, ಯಾವ ಸಾಲ ಮನ್ನಾ ಮಾಡುವುದಿಲ್ಲ ಎಂಬುದರ ಬಗ್ಗೆ ಮಾಹಿತಿ ಕೊಡಿ. ರೈತರು ಹೋರಾಟ ಮಾಡಿ ಅವರ ಬದುಕು ರೂಪಿಸಿಕೊಳ್ಳುತ್ತಾರೆ. ಅದನ್ನು ಬಿಟ್ಟು ಲಕ್ಷಾಂತರ ಜನರ ಜೀವನದ ಜೊತೆ ಆಟವಾಡಬೇಡಿ ಎಂದು ಕಿಡಿಕಾರಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]