ಮಂಗಳೂರು: ಬಸ್ಸು ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ ಎನ್ನುವುದೇ ನನಗೆ ಅನುಮಾನ ಉಂಟಾಗಿದೆ ಎಂದು ಬಸ್ಸಿನ ಮೂಲ ಮಾಲೀಕರಾಗಿದ್ದ ರಾಘವ ಕರ್ಕೇರ ಹೇಳಿದ್ದಾರೆ.
ಮಂಡ್ಯದ ಕನಗನಮರಡಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಬಸ್ ಖರೀದಿ ಮಾಡುವ ವೇಳೆಗೆ ಆದರ ಆಯಸ್ಸು 11 ವರ್ಷ ಆಗಿತ್ತು. ಬಳಿಕ ನನಗೆ ಇಲ್ಲಿ 1 ವರ್ಷ ಮಾತ್ರ ಓಡಿಸಲು ಅವಕಾಶವಿತ್ತು. ಆದ್ದರಿಂದ ನಾನು ಬಸ್ ಖರೀದಿ ಮಾಡಿ ಉತ್ತಮವಾಗಿ ನಿರ್ವಹಣೆ ಮಾಡಿದ್ದೆ. ಬಸ್ ಸ್ಥಿತಿ ಉತ್ತಮವಾಗಿದ್ದ ಕಾರಣ ಮೂರು ವರ್ಷಕ್ಕೆ ರಿನೀವಲ್ ಆಗಿತ್ತು. 12 ವರ್ಷ ಬಸ್ಸಿನ ಆಯಸ್ಸು ಇದ್ದರೂ ಚೆನ್ನಾಗಿ ನಿರ್ವಹಣೆ ಮಾಡಿದ್ದರೆ 15 ವರ್ಷ ಇಲ್ಲಿ ಓಡಿಸಬಹುದು ಎಂದು ತಿಳಿಸಿದರು.
ಬಸ್ಸಿನ ಆಯಸ್ಸು 15 ವರ್ಷಕ್ಕೆ 4 ತಿಂಗಳು ಬಾಕಿ ಇರುವ ವೇಳೆ ನಾನು ಮಾರಾಟ ಮಾಡಿದೆ. ಆಗ ಅವರಿಗೆ ಒಂದು ಅವಧಿಗೆ ಚಾಲನೆ ಮಾಡಲು ಅವಕಾಶವಿತ್ತು. ಈಗ ಬಸ್ ಹೆಚ್ಚುವರಿಯಾಗಿ 3 ವರ್ಷ ಓಡಿಸಿದ್ದಾರೆ. ಇದಕ್ಕೆ ಹೇಗೆ ಅನುಮತಿ ಸಿಕ್ಕಿದೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ನಾನು ಬಸ್ ಕಡಿಮೆ ಅವಧಿಗೆ ಚಾಲನೆ ಮಾಡುವ ಉದ್ದೇಶದಿಂದ ಖರೀದಿ ಮಾಡಿದ್ದೆ. ಕಡಿಮೆ ಕಲೆಕ್ಷನ್ ಆಗುತ್ತಿದ್ದ ಕಾರಣ ಈ ರೂಟ್ ನಲ್ಲಿ ಹೊಸ ಬಸ್ ಓಡಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಉತ್ತಮ ಸ್ಥಿತಿಯಲ್ಲೇ ಇಟ್ಟು ಮಾರಾಟ ಮಾಡಿದ್ದೇನೆ. ಅವರಿಗೆ ಹೆಚ್ಚುವರಿ ಅನುಮತಿ ಹೇಗೆ ಲಭಿಸಿದೆ ಎನ್ನುವುದು ತಿಳಿದುಕೊಳ್ಳಬೇಕಿದೆ. ಅಲ್ಲದೇ ಯಾವುದೇ ಅಪಘಾತವಾದ ಬಳಿಕ ತನ್ನ ಜೀವ ಕೊಟ್ಟು ಪ್ರಯಾಣಿಕರ ಜೀವ ಉಳಿಸುವುದು ಚಾಲಕನ ಕರ್ತವ್ಯ. ಆದರೆ ಈ ಘಟನೆಯಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿರುವುದು ಬೇಸರ ತಂದಿದೆ ಎಂದು ತಿಳಿಸಿದರು. ಇದನ್ನು ಓದಿ: 30ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!
ಇತಿಹಾಸ ಕೆದಕಿದಾಗ ಮತ್ತಷ್ಟು ಮಾಹಿತಿ ಸಿಕ್ಕಿದ್ದು ಇದೂವರೆಗೆ 9 ಮಂದಿ ಈ ಬಸ್ಸಿನ ಮಾಲೀಕರಾಗಿದ್ದಾರೆ. 2001ರ ಜೂ.1ಕ್ಕೆ ಆರ್ ಟಿಓ ಕಚೇರಿಯಲ್ಲಿ ನೋಂದಣಿ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಬಸ್ಸಿನ ಗರಿಷ್ಟ ಆಯಸ್ಸು 15 ವರ್ಷವಾಗಿದ್ದು, ನಂತರ ಈ ಬಸ್ಸನ್ನು ಓಡಿಸುವಂತಿಲ್ಲ ಎನ್ನುವ ನಿರ್ಧಾರವನ್ನು ಮಂಗಳೂರು ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv