ತಿರುವನಂತಪುರಂ: ಕಳಪೆ ರಸ್ತೆಗಳ ಸಮಸ್ಯೆ ಯಾವ ಊರಲ್ಲಿ ಇಲ್ಲ ಹೇಳಿ? ಸರ್ಕಾರದ ಕೆಲಸಕ್ಕೆ ಜನರು ಭಿನ್ನ ವಿಭಿನ್ನವಾಗಿ ಪ್ರತಿಭಟಿಸುವುದುಂಟು. ಇಲ್ಲೊಬ್ಬ ಆಸಾಮಿ ರಸ್ತೆಯ ಕಳಪೆ ಕಾಮಗಾರಿಯನ್ನು ಪ್ರತಿಭಟಿಸಲು ಅದೇ ಗುಂಡಿಗಳಲ್ಲಿ ತುಂಬಿದ್ದ ನೀರಿನಲ್ಲಿ ಸ್ನಾನ ಮಾಡಿದ್ದಾನೆ. ಇದು ಜನರ ಗಮನ ಸೆಳೆದು ನಗೆಪಾಟಲಿಗೆ ಪಾತ್ರವಾಗಿದ್ದಲ್ಲದೇ ಅದರ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿದೆ.
ಇತ್ತೀಚೆಗೆ ಕೇರಳದ ವ್ಯಕ್ತಿಯೊಬ್ಬ ರಸ್ತೆಗಳಲ್ಲಿ ಹೆಚ್ಚುತ್ತಿರುವ ಗುಂಡಿಗಳ ಅಪಾಯದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ್ದಾನೆ. ಬಕೆಟ್, ಮಗ್, ಸೋಪು, ಟವೆಲ್ನೊಂದಿಗೆ ಹೊರಟ ವ್ಯಕ್ತಿ ರಸ್ತೆ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿಯೇ ಸ್ನಾನ ಮಾಡಿದ್ದಾನೆ. ಕೆಸರು ನೀರಿನಲ್ಲಿಯೇ ತನ್ನ ಬಟ್ಟೆಗಳನ್ನೂ ತೊಳೆದಿದ್ದಾನೆ.
ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರು ಇದನ್ನು ಕುತೂಹಲದಿಂದ ವೀಕ್ಷಿಸಿದ್ದಾರಲ್ಲದೇ ವೀಡಿಯೋ ಚಿತ್ರೀಕರಣವನ್ನೂ ಮಾಡಿದ್ದಾರೆ. ಈ ಘಟನೆ ಭಾನುವಾರ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ವಿಚಿತ್ರವಾಗಿ ಪ್ರತಿಭಟಿಸಿದ ವ್ಯಕ್ತಿಯನ್ನು ಹಮ್ಜಾ ಪೊರಾಲಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಆಸ್ತಿ ವಿವರ ಘೋಷಿಸಿಕೊಂಡ ಪ್ರಧಾನಿ ಮೋದಿ – ಎಷ್ಟಿದೆ ಗೊತ್ತಾ?
ವೈರಲ್ ಆಗಿರುವ ವೀಡಿಯೋದಲ್ಲಿ ವ್ಯಕ್ತಿ ವಿಭಿನ್ನವಾಗಿ ಪ್ರತಿಭಟಿಸುವ ಸಂದರ್ಭ ಸ್ಥಳೀಯ ಶಾಸಕ ಯುಎ ತಿಲಕ್ ಸ್ಥಳಕ್ಕೆ ಆಗಮಿಸಿರುವುದು ಕಂಡುಬಂದಿದೆ. ಶಾಸಕರ ಕಾರು ಸ್ಥಳ ಸಮೀಪಿಸುತ್ತಿದ್ದಂತೆ ವ್ಯಕ್ತಿ ಗುಂಡಿ ನೀರಿನಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತಿದ್ದಾನೆ. ಶಾಸಕರ ಮುಂದೆಯೇ ಯೋಗಾಸನಗಳನ್ನೂ ಮಾಡಿದ್ದಾನೆ.
A different way to protest for potholes… pic.twitter.com/tZGqKWUDpi
— Savitha Murthy (@savithamurthy2) August 9, 2022
ಇದರ ವೀಡಿಯೋ ವೈರಲ್ ಆಗಿದ್ದು ಮಾತ್ರವಲ್ಲದೇ, ರಸ್ತೆ ಗುಂಡಿಗಳಿಂದ ಹೆಚ್ಚುತ್ತಿರುವ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ಹೈಕೋರ್ಟ್ ತಕ್ಷಣವೇ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಹೆಚ್ಎಐ)ಕ್ಕೆ ಸೂಚನೆ ನೀಡಿದೆ. ಇದನ್ನೂ ಓದಿ: ಪಾಕ್ ರಾಜಕಾರಣಿ ಸಂಬಂಧಿ ಕಾರ್ ಓವರ್ಟೇಕ್ – ಹಿಂದೂ ಕುಟುಂಬದ ಮೇಲೆ ದಾಳಿ