ಕೊಪ್ಪಳ: ಗ್ರಾಮದ 15ಕ್ಕೂ ಹೆಚ್ಚು ನಾಯಿಗಳನ್ನು ಕೊಂದು ಕ್ರೂರತೆ ಮೆರೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದ್ದು, ಯಲಬುರ್ಗಾ ನಿವಾಸಿ ಸಂಜೀವಪ್ಪ ಈ ಕೃತ್ಯವೆಸಗಿ ಪರಾರಿಯಾಗಿದ್ದಾನೆ. ಸಂಜೀವಪ್ಪ ಹಂದಿ ಸಾಕಾಣಿಕೆ ಮಾಡುತ್ತಿದ್ದು, ಗ್ರಾಮದಲ್ಲಿ ಹಂದಿ ಮರಿಗಳನ್ನು ಬಿಟ್ಟಿದ್ದಾನೆ.
ನಾಯಿಗಳು ಕೆಲ ಹಂದಿ ಮರಿಗಳನ್ನು ಸಾಯಿಸಿದ್ದವು ಇದರಿಂದ ರೊಚ್ಚಿಗೆದ್ದ ಸಂಜೀವಪ್ಪ ಕಳೆದ ರಾತ್ರಿ ಸಿಕ್ಕ ಸಿಕ್ಕ ನಾಯಿಗಳನ್ನು ದೊಣ್ಣೆಯಿಂದ ಹೊಡೆದು ಸಾಯಿಸಿ ಗ್ರಾಮದಿಂದ ಕಾಲ್ಕಿತ್ತಿದ್ದಾನೆ. ಬೆಳಿಗ್ಗೆ ಸತ್ತಿರುವ ನಾಯಿಗಳನ್ನು ಗಮನಿಸಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.
ಕೆಲ ಸಮಯ ಗ್ರಾಮದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಬೇವೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದ್ದರು. ನಾಯಿಗಳನ್ನು ಕೊಂದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv