ನವದೆಹಲಿ: 6 ವರ್ಷಗಳ ಹಿಂದೆ ಪತ್ನಿಯನ್ನ ಚಾಕುವಿನಿಂದ 21 ಬಾರಿ ಇರಿದು, ತಲೆಗೆ ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹಿಳೆಯ ತಲೆ ಮೇಲೆ ಎಷ್ಟು ಬರ್ಬರವಾಗಿ ಹಲ್ಲೆ ಮಾಡಲಾಗಿತ್ತೆಂದರೆ ತಲೆಬುರುಡೆಯ ಮೂಳೆಯೇ ಮುರಿದುಹೋಗಿತ್ತು. 2012ರ ಅಕ್ಟೋಬರ್ 31 ಹಾಗೂ ನವೆಂಬರ್ 1ರ ಮಧ್ಯರಾತ್ರಿ ದೇವೇಂದ್ರ ದಾಸ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದು, ಬಳಿಕ ಆಕೆಯನ್ನ 21 ಬಾರಿ ಚಾಕುವಿನಿಂದ ಇರಿದು, ತಲೆ ಮೇಲೆ ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಮನೆ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಯಾವುದೇ ಪ್ರಚೋದನೆ ಇಲ್ಲದೆ ವ್ಯಕ್ತಿ ಇಷ್ಟೊಂದು ಕ್ರೂರವಾಗಿ ವರ್ತಿಸಿದ್ದಾನೆ ಎಂಬುದನ್ನ ಮನಗಂಡ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ದಾಸ್ ತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸ್ಪಷ್ಟ. ಆದ್ದರಿಂದ ನಮ್ಮ ಪ್ರಕಾರ ದಾಸ್ ಮಾಡಿದ ಅಪರಾಧ ಕೊಲೆಯ ಉದ್ದೇಶವಿಲ್ಲದೆ ಮಾಡಿದ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಬರ್ಬರ ಹತ್ಯೆ ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ದಾಸ್ ವಾದಿಸಿದ್ದ. ಆದ್ರೆ ಆತನ ಮನವಿಯನ್ನ ತಿರಸ್ಕರಿಸಿದ ನ್ಯಾ. ಸುನಿಲ್ ಗೌರ್ ಹಾಗೂ ಪ್ರತಿಭಾ ಎಂ ಸಿಂಗ್ ಅವರ ಪೀಠ, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.