ಬಳ್ಳಾರಿ: ಹೆಂಡತಿಯ ಶೀಲ ಶಂಕಿಸಿ ಐವರನ್ನು ಕೊಚ್ಚಿ ಕೊಲೆ ಮಾಡಿದ್ದ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಧಾರವಾಡ ಹೈಕೋರ್ಟ್ (Dharwad High Court) ಆದೇಶ ಹೊರಡಿಸಿದೆ.
ಗಣಿ ನಾಡು ಬಳ್ಳಾರಿ (Bellari) ಜಿಲ್ಲೆ ಕಂಪ್ಲಿ ತಾಲ್ಲೂಕಿನ ಚಪ್ಪರದಳ್ಳಿ ನಿವಾಸಿ ವಡ್ಡರ ತಿಪ್ಪಯ್ಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಬಳ್ಳಾರಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಮರಣದಂಡನೆ ಶಿಕ್ಷೆ ಆದೇಶವನ್ನು ಧಾರವಾಡ ಹೈಕೋರ್ಟ್ ಈಗ ಎತ್ತಿ ಹಿಡಿದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು
ಪ್ರಕರಣ ಏನು?
2017ರ ಫೆಬ್ರವರಿ 25 ರಂದು ಕೊಲೆ ನಡೆದಿತ್ತು. ಪತ್ನಿಯ ಶೀಲ ಶಂಕಿಸಿ ಪತ್ನಿ, ಆಕೆಯ ತಂಗಿ, ಹೆತ್ತ ಮೂರು ಮಕ್ಕಳು ಸೇರಿ ಒಟ್ಟು ಐವರನ್ನ ತಿಪ್ಪಯ್ಯ ಕೊಲೆ ಮಾಡಿದ್ದ. ಪತ್ನಿ ಪಕ್ಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ (8), ಪವಿತ್ರ (6) ಹತ್ಯೆಯಾಗಿದ್ದ ದುರ್ದೈವಿಗಳು. ಈ ಸಂಬಂಧ ಕಂಪ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ, ನ್ಯಾಯಾಲಯವು ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಿದ್ದ ತಿಪ್ಪಯ್ಯ, ಧಾರವಾಡ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯವು ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ. ಕೆಳ ನ್ಯಾಯಾಲಯ ನೀಡಿದ ಆದೇಶದಂತೆ ಮರಣದಂಡನೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ