ಚಿತ್ರದುರ್ಗ: ಟೀ ಸಪ್ಲೈ ಮಾಡಿಕೊಂಡೇ ಎಲ್ಲರ ವಿಶ್ವಾಸ ಗಳಿಸಿಕೊಂಡಿದ್ದ ವ್ಯಕ್ತಿಯೊಬ್ಬ ಅಂಗೈಯಲ್ಲೇ ಅರಮನೆ ತೋರಿಸಿ ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ.
ಚಿತ್ರದುರ್ಗ ನಗರದ ನೆಹರು ನಗರದ ಸೈದು ಟೀ ಸ್ಟಾಲ್ ಬಳಿ ಈ ಘಟನೆ ನಡೆದಿದೆ. ಈ ಅಂಗಡಿಯ ಮಾಲೀಕ ಸೈಯದ್ ಗೌಸ್ ಅಲಿಯಾಸ್ ಸೈದು, ಚೀಟಿ ವ್ಯವಹಾರದ ಹೆಸರಿನಲ್ಲಿ ಸುಮಾರು 250 ಜನರ ಬಳಿ ಕೋಟ್ಯಂತರ ರೂಪಾಯಿ ಪಡೆದಿದ್ದನು. ಹಣ ವಾಪಸ್ ಕೇಳಲು ಹೋದವರಿಗೆ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಹಿಡಿದಿದ್ದೇನೆ. ಅದರ ಬಿಲ್ ಆದ ಬಳಿಕ ದುಡ್ಡು ಹಿಂದಿರುಗಿಸುವುದಾಗಿ ಹೇಳಿ ಮತ್ತಷ್ಟು ಜನರ ಬಳಿ ಹಣ ಪಡೆದಿದ್ದಾನೆ. ಹೀಗೆ ನಂಬಿಸಿ ಹಣ ಪಡೆದ ಸೈದು ಇದೀಗ ಇದ್ದಕ್ಕಿದ್ದಂತೆ ಸುಮಾರು 7 ಕೋಟಿ ರೂ. ಹಣದೊಂದಿಗೆ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಪರಿಣಾಮ ಹಲವು ಮದುವೆಗಳು ಸಹ ನಿಂತು ಹೋಗಿವೆ. ಪತಿಗೆ ಗೊತ್ತಾಗದಂತೆ ಚಿನ್ನಾಭರಣ ಮಾರಾಟ ಮಾಡಿ ಮಹಿಳೆಯರು ಚೀಟಿ ಹಣ ಕಟ್ಟಿದ್ದು ಕುಟುಂಬಗಳಲ್ಲಿ ಸಮಸ್ಯೆ ನಿರ್ಮಾಣ ಆಗಿವೆ. ಹಣ ಕೇಳಲು ಮನೆ ಬಳಿಗೆ ಹೋದರೆ ಪೊಲೀಸರನ್ನು ಕರೆಸಿ ಬೆದರಿಸಲಾಗುತ್ತದೆ. ಕೆಲವರ ವಿರುದ್ಧ ದೂರು ದಾಖಲಿಸಿ ಕೋರ್ಟಿಗೆ ಅಲೆದಾಡುವಂತೆ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನ ಸೈದು ಹೋಟೆಲ್ ಹಾಗೂ ಮನೆ ಬಳಿ ಜಮಾಯಿಸಿದ್ದ ವಿಷಯ ತಿಳಿದು ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ನಿಯಂತ್ರಿಸಿದರು. ಈ ಬಗ್ಗೆ ದೂರು ನೀಡಿದರೆ ಕಾನೂನು ಕ್ರಮ ಜರುಗಿಸುವ ಬಗ್ಗೆ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ವಂಚನೆಯ ಆರೋಪ ಹೊತ್ತಿರುವ ಸೈದು ಸಹೋದರ ಖಾಜಾ ಹುಸೇನ್ ಗೆ ಈ ಬಗ್ಗೆ ಕೇಳಿದರೆ ನನ್ನ ಅಣ್ಣ ಚೀಟಿ ವ್ಯವಹಾರ ಮಾಡಿ ಇದೀಗ ನಾಪತ್ತೆ ಆಗಿರೋದು ನಿಜ. ಆದರೆ ಇಷ್ಟೆಲ್ಲ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv