ಕೊಲ್ಕತ್ತ: ಬಿಜೆಪಿ ಒಂದು “ಉಗ್ರಗಾಮಿ ಸಂಘಟನೆ”. ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಕಾಂಗ್ರೆಸ್ ಕೂಡ ಬಿಜೆಪಿಗೆ ಬೆಂಬಲ ನೀಡಿತ್ತು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಟಿಎಂಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಾಯಕಿ ಮಮತಾ ಬ್ಯಾನರ್ಜಿ, ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಜೊಡಿಸುವುದಾಗಿ ಹೇಳಿದ್ದರು. ಆದರೆ ಈಗ ಕಾಂಗ್ರೆಸ್ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವುದು ಲೋಕಸಭಾ ಚುನಾವಣೆಗೆ ಭಾರೀ ಟ್ವಿಸ್ಟ್ ನೀಡಿದ್ದಾರೆ.
ಬಿಜೆಪಿ ನಾಯಕರು ಧಾರ್ಮಿಕ ನೆಲೆಗಟ್ಟಿನ ಮೇಲೆ ದೇಶದ ಜನರನ್ನು ವಿಂಗಡಿಸುತ್ತಿದ್ದಾರೆ. ನಾವು ಅವರಂತೆ ಉಗ್ರಗಾಮಿ ಸಂಘಟನೆ ಅಲ್ಲ, ಅವರು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ ಸಮಾಜದವರನ್ನು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲದೇ ಹಿಂದೂ ಧರ್ಮದಲ್ಲಿಯೇ ಉನ್ನತ ಜಾತಿ ಹಾಗೂ ಕೆಳ ಜಾತಿ ಅಂಥ ವಿಂಗಡಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲುವು ಸಾಧಿಸಲು ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ)ದಲ್ಲಿ ಅಕ್ರಮ ಎಸಗಲು ಬಿಜೆಪಿ ಮುಂದಾಗುತ್ತಿದೆ. ಇದನ್ನು ತಡೆಯಲು ಕಾರ್ಯಕರ್ತರು ಜಾಗೃತರಾಗಿರಬೇಕು ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದರು.
ಪಶ್ಚಿಮ ಬಂಗಾಳ ಚುನಾವಣೆಯನ್ನು ನೆನೆದ ಸಿಎಂ ಮಮತಾ ಬ್ಯಾನರ್ಜಿ ಅವರು, ನಮ್ಮನ್ನು ಸೋಲಿಸಲು ಬಿಜೆಪಿ ಜೊತೆಗೆ ಕಾಂಗ್ರೆಸ್, ಸಿಪಿಐ (ಎಂ) ಮತ್ತು ಮಾವೊವಾದಿಗಳು ಕೈ ಜೋಡಿಸಿದ್ದರು. ಆದರೆ ಈಗ ಕಾಂಗ್ರೆಸ್ ತನ್ನ ಹಿತ ಸಾಧನೆಗೆ ನಮ್ಮ ಜೊತೆಗೆ ಕೈ ಜೊಡಿಸಲು ಬಂದಿದೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಹೇಳಿದರು.
ಮೇ ತಿಂಗಳಿನಲ್ಲಿ ಮಹೇಶ್ತಾದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಶೇ.30 ರಷ್ಟು ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಭಾಗಿಯಾಗಿತ್ತು. ಆದರೂ ತೃಣಮೂಲ ಕಾಂಗ್ರೆಸ್ 1,04,818 ಮತಗಳನ್ನು ಪಡೆದು ಜಯ ಗಳಿಸಿತು. ಬಿಜೆಪಿ ಗಳಿಸಿದ್ದು ಕೇವಲ 42,053 ಮತಗಳು ಮಾತ್ರ ಎಂದು ವ್ಯಂಗ್ಯವಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಪ್ರತಿ ಇವಿಎಂ ಯಂತ್ರವನ್ನು ಪರಿಶೀಲನೆ ಮಾಡಿಯೇ ಬಳಕೆ ಮಾಡಬೇಕು ಎಂದರು.