ಚಿಕ್ಕಮಗಳೂರು: ಮಹಾಶಿವರಾತ್ರಿಯಂದು (Maha Shivratri) ಶಿವನ ತವರು ಎಂದೇ ಭಾವಿಸಿರುವ ಧರ್ಮಸ್ಥಳದಲ್ಲಿ (Dharmasthala) ಶಿವರಾತ್ರಿ ಆಚರಿಸಬೇಕೆಂದು ಅಸಂಖ್ಯಾತ ಭಕ್ತರು ಆಸೆ ಹೊತ್ತಿರುತ್ತಾರೆ. ಅದಕ್ಕಾಗಿ ವಾರ-ತಿಂಗಳುಗಳ ಮುಂಚೆಯೇ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ದಿನಕ್ಕೆ ಇಷ್ಟು ಕಿ.ಮೀ. ನಡೆದರೆ ಶಿವರಾತ್ರಿಯಂದೇ ಶಿವನೂರು ತಲುಪುತ್ತೇವೆಂದು ಲೆಕ್ಕಾಚಾರ ಕೂಡ ಹಾಕಿಕೊಂಡಿರುತ್ತಾರೆ. ಭಕ್ತರ ಊರುಗಳ ದೂರಕ್ಕನುಗುಣವಾಗಿ ಪಾದಯಾತ್ರೆ ಆರಂಭಿಸಿ ಶಿವರಾತ್ರಿಯಂದು ಧರ್ಮಸ್ಥಳ ತಲುಪುತ್ತಾರೆ.
ಹೀಗೆ ಸಾಗುವ ಭಕ್ತರಿಗೆ ದಾರಿಯುದ್ದಕ್ಕೂ ನೂರಾರು ಕಷ್ಟಗಳು. ಭಕ್ತರು ಅದೆಲ್ಲವನ್ನೂ ಮೆಟ್ಟಿ ನೂರಾರು ಕಿ.ಮೀ. ಪಾದಯಾತ್ರೆ ಹೊರಟು ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.
ನೂರಾರು ವರ್ಷಗಳಿಂದ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಕೂಡ ಇಮ್ಮಡಿಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಬೀದರ್, ಬಾಗಲಕೋಟೆ ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಶಿವರಾತ್ರಿಗೆ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ, ಇನ್ನೇನೂ ಶಿವರಾತ್ರಿಗೆ ಐದು ದಿನ ಬಾಕಿಯಿದ್ದು ಸಾವಿರಾರು ಭಕ್ತರು ಈಗಾಗಲೇ ಧರ್ಮಸ್ಥಳದ ಹಾದಿ ಹಿಡಿದಿದ್ದಾರೆ.
ಸುಡುವ ಸೂರ್ಯನಿಗೂ ಬಗ್ಗದೇ, ಕಾದ ರಸ್ತೆಗೂ ಜಗ್ಗದೆ ಬರೋದೆಲ್ಲಾ ಬರಲಿ, ಭಗವಂತನ ದಯೆ ಇರಲೆಂದು ಮಂಜುನಾಥನ ದರ್ಶನಕ್ಕೆ ಹೊರಟ ಭಕ್ತರು ಮೇಲೆಂದು ಮೇಲೆ ಹೆಜ್ಜೆ ಹಾಕ್ತಾನೆ ಇದ್ದಾರೆ. ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೂಡ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ (Charmady Ghat) ತಪ್ಪಲು ಕೊಟ್ಟಿಗೆಹಾರಕ್ಕೆ ಬರಲೇಬೇಕು. ಈಗಾಗಲೇ ನಿತ್ಯ ನೂರಾರು ಜನ ಕೊಟ್ಟಿಗೆಹಾರ ದಾಟಿ ಚಾರ್ಮಾಡಿ ಘಾಟಿ ಇಳಿಯುತ್ತಿದ್ದಾರೆ
ಪಾದಯಾತ್ರೆ ಹೊರಟ ಭಕ್ತರಿಗೆ ಚಾರ್ಮಾಡಿ ಘಾಟಿ ಭಯ ತರಿಸಿದೆ. ಯಾಕಂದ್ರೆ, ಈಗಾಗಲೇ ಚಾರ್ಮಾಡಿ ಘಾಟಿಯಲ್ಲಿ ಆನೆ ಕಾಟ ಇದೆ. ಕೊಟ್ಟಿಗೆಹಾರ ತಪ್ಪಲಿನ ಹಲವು ಗ್ರಾಮಗಳಲ್ಲಿ ಹುಲಿ ಭಯ ಕೂಡ ಇದೆ. ಈ ಮಧ್ಯೆ ಚಾರ್ಮಾಡಿ ಘಾಟಿಯ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಓಡಾಡುವ ವಾಹನಗಳ ವೇಗ ಭಕ್ತರಲ್ಲಿ ಭಯ ತರಿಸಿರೋದಂತೂ ಸತ್ಯ. ಹಾಗಾಗಿ, ಕೊಟ್ಟಿಗೆಹಾರದ ಸ್ಥಳಿಯರು ಹಾಗೂ ಪೊಲೀಸರು ಕೂಡ ಚೆಕ್ ಪೋಸ್ಟ್ಗಳಲ್ಲಿ ವಾಹನಗಳಿಗೆ ನಿಧಾನಕ್ಕೆ ಚಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಚಾರ್ಮಾಡಿ ಘಾಟಿಯ ಕೆಲ ಜಾಗದಲ್ಲಿ ಕಿರಿದಾದ ರಸ್ತೆ, ಹಾವು-ಬಳುಕಿನ ಮೈಕಟ್ಟನ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಡ್ತಿರೋದು ಭಕ್ತರ ಆತಂಕಕ್ಕೂ ಕಾರಣವಾಗಿದೆ. ನಿತ್ಯ ಸಾವಿರಾರು ಭಕ್ತರು ಈ ಮಾರ್ಗದಲ್ಲಿ ಪಾದಯಾತ್ರೆ ಮಾಡುತ್ತಿದ್ದು ಭಕ್ತರು ಭಯದಲ್ಲೇ ನಡೆಯುವಂತಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಹಗಲಿರುಳೆನ್ನದೇ ಒಂಟಿ ಸಲಗ ಆಗಾಗ ಗಂಟೆಗಟ್ಟಲೇ ರಸ್ತೆ ಮಧ್ಯೆ ಬಂದು ನಿಲ್ಲುತ್ತೆ. ಶನಿವಾರದವರೆಗೂ ಚಾರ್ಮಾಡಿ ಘಾಟಿಯ 22 ಕಿ.ಮೀ. ಉದ್ದಕ್ಕೂ ಸಾವಿರಾರು ಪಾದಯಾತ್ರಿಗಳು ಯಾತ್ರೆ ಕೈಗೊಂಡಿದ್ದು ಅತ್ಯಂತ ಎಚ್ಚರಿಕೆಯಿಂದಿರಬೇಕಿದೆ.
ಈಗಾಗಲೇ ರಾಜ್ಯದ ಮೂಲೆಮೂಲೆಗಳಿಂದ ವಯಸ್ಸಿನ ಮಿತಿ-ಅಂತರವೇ ಇಲ್ಲದೇ ಲಕ್ಷಾಂತರ ಜನ ಪಾದಯಾತ್ರೆ ಆರಂಭಿಸಿದ್ದಾರೆ. ಯುವಕ-ಯುವತಿಯರು-ವೃದ್ಧರು-ಮಕ್ಕಳು-ಮಹಿಳೆಯರು ತಂಡೋಪ ತಂಡವಾಗಿ ತೆರಳುತ್ತಿದ್ದಾರೆ. ಕಾದ ಕಾವಲಿಯಂತಾದ ರಸ್ತೆ ಕಾಲಲ್ಲಿ ಗುಳ್ಳೆ ತರಿಸುತ್ತಿದೆ. ಆದರೆ, ಭಕ್ತಿಯಲ್ಲಿ ಮೈಮರೆತಿರೋ ಭಕ್ತರು ಆ ಮಂಜುನಾಥನ ಕಣ್ತುಂಬಿಕೊಳ್ಳಲು ನಿರಂತರವಾಗಿ ಸಾಗುತ್ತಿದ್ದಾರೆ. ಕೆಲವರು ಮಕ್ಕಳನ್ನ ಹೆಗಲ ಮೇಲೆ ಹೊತ್ತಿದ್ದರೆ, ಕೆಲವರು ಬಟ್ಟೆ ಬ್ಯಾಗ್ಗಳನ್ನು ತಲೆ ಮೇಲೆ ಹೊದ್ದು ಸಾಗುತ್ತಿದ್ದಾರೆ. ಆದರೆ, ಇಂದಿನಿಂದ ಕೊಟ್ಟಿಗೆಹಾರ ದಾಟಿದರೆ ಉಜಿರೆಯವರೆಗೂ ಹಚ್ಚ ಹಸಿರಿನ ಕಾಡಿನ ಮಧ್ಯೆ ಕೇಸರಿ ಬಣ್ಣ ರಾರಾಜಿಸಲಿದೆ. ರಾಜ್ಯದ ನಾನಾ ಭಾಗಗಳಿಂದ ಹೊರಟ ಬಹುತೇಕ ಭಕ್ತರು ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ಗೆ ಬರಲೇಬೇಕು. ಅಲ್ಲಿಂದ ಧರ್ಮಸ್ಥಳಕ್ಕೆ ಸುಮಾರು 65-70 ಕಿ.ಮೀ. ಇದ್ದು, ದಾರಿಯುದ್ಧಕ್ಕೂ ಸಾವಿರಾರು ಜನ ಸಾಗುತಿದ್ದು ಸರ್ಕಾರ ಭಕ್ತರ ಅನುಕೂಲಕ್ಕಾಗಿ ಕೆಲ ಸೌಲಭ್ಯ-ಸೌಕರ್ಯಗಳನ್ನ ಮಾಡಲೇಬೇಕಿದೆ.
ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ 173 ಆಗಿದ್ದು ನಿತ್ಯ ಹಗಲಿರುಳೆನ್ನದೇ ಸಾವಿರಾರು ವಾಹನಗಳು ಓಡಾಡುತ್ತವೆ. ಭಕ್ತರು ರಸ್ತೆಯ ಎಡಬದಿಯಲ್ಲೇ ಸಾಗಿದರೂ ಸಾವಿರಾರು ಭಕ್ತರು, ಸಾವಿರಾರು ವಾಹನಗಳು, ಹಾವು-ಬಳುಕಿನ ಮೈಕಟ್ಟನ ರಸ್ತೆ ಅಪಾಯವೇ ಸರಿ. ಹಾಗಾಗಿ, ಸರ್ಕಾರ ಅನಾಹುತ ನಡೆದ ಬಳಿಕ ಕಾರಣ ಹುಡುಕುವ ಬದಲು ಅನಾಹುತವೇ ನಡೆಯದಂತೆ ತಡೆಯಬೇಕಾದ ಅನಿವಾರ್ಯತೆ ಹೆಚ್ಚಿದೆ. ಭಕ್ತರಿಗೆ ಜಾಗೃತ ಮೂಡಿಸುವುದರ ಜೊತೆ ತಾತ್ಕಾಲಿಕವಾಗಿ ಅಪಾಯಕಾರಿ ತಿರುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ಭಕ್ತರು ಬರುತ್ತಿದ್ದಾರೆ. ವಾಹನಗಳನ್ನ ನಿಧಾನವಾಗಿ ಚಲಿಸು ಎಂದು ನಾಮಫಲಕಗಳನ್ನು ಹಾಕುವುದು ತುಂಬಾ ಒಳ್ಳೆಯದು. ಜೊತೆಗೆ ಕತ್ತಲಾಗುತ್ತಿದ್ದಂತೆ ಬಹುತೇಕ ಭಕ್ತರು ಕೊಟ್ಟಿಗೆಹಾರ ಅಥವಾ ಬಣಕಲ್ ಗ್ರಾಮದಲ್ಲೇ ತಂಗುತ್ತಾರೆ. ಅಂಗಡಿ-ಮುಂಗಟ್ಟು, ಬಸ್ ನಿಲ್ದಾಣ ಸೇರಿ ಜಾಗ ಸಿಕ್ಕ ಕಡೆ ನಿದ್ರೆಗೆ ಜಾರುತ್ತಾರೆ. ಸರ್ಕಾರ ಅವರಿಗೆಲ್ಲಾ ಉಳಿಯಲು ತಾತ್ಕಾಲಿಕ ವ್ಯವಸ್ಥೆ ಜೊತೆ ಶೌಚಾಲಯದ ವ್ಯವಸ್ಥೆ ಮಾಡಬೇಕೆಂದು ಭಕ್ತರ ಜೊತೆ ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸರ್ಕಾರ ಮಾಡಬೇಕಾದ ಕೆಲಸವನ್ನ ಕೆಲ ಸ್ಥಳಿಯ ದಾನಿಗಳು ಮಾಡುತ್ತಿದ್ದಾರೆ. ಆದರೆ, ನಿತ್ಯ ಹತ್ತಿಪ್ಪತ್ತು ಸಾವಿರ ಭಕ್ತರಿಗೆ ಎಲ್ಲಾ ಸೌಲಭ್ಯ ಕಲ್ಪಿಸೋದು ಸುಲಭದ ಮಾತಲ್ಲ. ಆದರೆ, ಸ್ಥಳಿಯರು ತಕ್ಕ ಮಟ್ಟಿಗೆ ಅದನ್ನ ಮಾಡುತ್ತಿದ್ದಾರೆ. ಸರ್ಕಾರವೂ ಅವರ ಜೊತೆ ಕೈಜೋಡಿಸಿದರೆ ಪಾದಯಾತ್ರಿ ಭಕ್ತರು ಯಾವುದೇ ಸಮಸ್ಯೆ ಇಲ್ಲದೇ ತಮ್ಮ ಯಾತ್ರೆ ಮುಗಿಸುತ್ತಾರೆ. ಕೆಲ ಸ್ಥಳಿಯರು ಭಕ್ತರಿಗೆ ನೀರಿನ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಸ್ಥಳಿಯ ಕೆಲ ಸಹೃದಯಿಗಳು ಪಾದಯಾತ್ರಿ ಭಕ್ತರ ಕಾಲಿಗೆ ಮಜಾಜ್ ಮಾಡುತ್ತಿದ್ದಾರೆ. ಊಟ-ತಿಂಡಿ-ಹಣ್ಣು-ಜ್ಯೂಸ್ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಕೆಲ ಭಕ್ತರು ಕೂಡ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪ್ರವಾಸಿಗರು ಮಾರ್ಗ ಮಧ್ಯೆ ತಿಂದ ಊಟ-ತಿಂಡಿ ಹಾಗೂ ನೀರಿನ ಬಾಟಲಿಗಳನ್ನ ಎಲ್ಲೆಂದರಲ್ಲಿ ಎಸೆಯುತ್ತಾರೆ. ಹಾಗಾಗಿ, ಸರ್ಕಾರ ಅಲ್ಲಲ್ಲೇ ಕಸದ ಡಬ್ಬಗಳ ವ್ಯವಸ್ಥೆ ಮಾಡಬೇಕಿದೆ. ಇದರಿಂದ ಚಾರ್ಮಾಡಿಘಾಟ್ ಮಲೀನವಾಗೋದು ತಪ್ಪಲಿದೆ. ಹಾಗಾಗಿ, ಸರ್ಕಾರ ಕೂಡಲೇ ಭಕ್ತರ ಅನುಕೂಲಕ್ಕಾಗಿ ಸೌಲಭ್ಯಗಳನ್ನ ಕಲ್ಪಿಸೋದರ ಜೊತೆ ಅವರ ಸುರಕ್ಷತೆಗಾಗಿಯೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.



