– ಶಿವ ಕೃಪೆಗೆ ಪಾತ್ರರಾಗಲು ಭಕ್ತರ ದಾಂಗುಡಿ
ಬೆಂಗಳೂರು: ಇಂದು ನಾಡಿನೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ ಸಡಗರ ಮನೆ ಮಾಡಿದೆ. ಅದರಲ್ಲೂ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಪರಶಿವನ ಸ್ಮರಣೆ ಮುಗಿಲು ಮುಟ್ಟಿದೆ.
ಮಹಾ ಶಿವರಾತ್ರಿ ಪರಮ ಶಿವನ ಭಕ್ತರಿಗೆ ಅತ್ಯಂತ ಪ್ರಿಯವಾದ ದಿನ. ಪ್ರತಿವರ್ಷದಂತೆ ಮಾಸಗಳಲ್ಲೇ ಶ್ರೇಷ್ಠವಾದ ಮಾಘ ಮಾಸ, ಕೃಷ್ಣ ಪಕ್ಷದ ತ್ರಯೋದಶಿಯಂದು ಶಿವರಾತ್ರಿ ಬಂದಿದೆ. ಹೀಗಾಗಿ ನಗರದ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ ಗವಿಪುರದ ಗಂಗಾಧರ ದೇಗುಲದಲ್ಲಿ ವಿಶೇಷವಾಗಿ ರುದ್ರಾಭಿಷೇಕ, ವಿಶೇಷ ಅಭಿಷೇಕ ಪುನಸ್ಕಾರಗಳು ಶಿವನಿಗೆ ನೆರವೇರಲಿದೆ.
ನೀಲಕಂಠೇಶ್ವರನ ಇಂದಿನ ಆಚರಣೆಗಳೇನು..?
ಸೂರ್ಯೋದಯದ ನಂತ್ರ ಮಾಘಸ್ನಾನ ಮಾಡಬೇಕು. ಶಿವನಿಗೆ ಮಾಡುವ ಹಾಲು, ಮೊಸರು ಅಭಿಷೇಕ ನೋಡಬೇಕು. ಸ್ವಾಮಿಯ ಅಲಂಕಾರಗಳನ್ನು ನೋಡಬೇಕು. ದೇವಾಲಯದಲ್ಲಿ ಓಂ ನಮಃ ಶಿವಾಯ ಎಂದು ಪಠಿಸಬೇಕು. ಜಾಗರಣೆ ಮಾಡುವಾಗ ಶಿವನ ಪರಿಸರ ಇರಬೇಕು. ಶಿವನ ಭಜನೆ ಅಥವಾ ಪಂಚಾಕ್ಷರಿ ಮಂತ್ರ ಪಠಿಸಬೇಕು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ರುದ್ರಾಕ್ಷಿ,ಎಕ್ಕೆ ಮುಂತಾದವುಗಳನ್ನು ಅರ್ಪಿಸಬೇಕು.
ಇಂದು ಬೆಳಗ್ಗಿನಿಂದಲೇ ಗವಿಗಂಗಾಧರೇಶ್ವನಿಗೆ ಪೂಜೆ ಆರಂಭವಾಗುತ್ತದೆ. ಭಕ್ತಾದಿಗಳಿಗೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಈ ಶಿವರಾತ್ರಿಯಿಂದ ಯಾವುದೇ ರಾಶಿ, ರಾಜಕಾರಣಿಗಳಿಗೂ ಕೆಡಕು ಇಲ್ಲ ಎಂದು ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.