ಇಬ್ಭಾಗದತ್ತ ಶಿವಸೇನೆ – ಮಹಾರಾಷ್ಟ್ರದಲ್ಲಿ ಮುಂದೇನಾಗಬಹುದು? ಅಂಕಿ ಸಂಖ್ಯೆ ಲೆಕ್ಕಾಚಾರ ಏನು?

Public TV
2 Min Read
Uddhav Thackeray 1

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ತಲೆದೂರಿದೆ. ಆಪರೇಷನ್ ಕಮಲದ ಪರಿಣಾಮ ಉದ್ಧವ್ ಸರ್ಕಾರ ಪತನದ ಅಂಚು ತಲುಪಿದೆ. ಒಂದು ಕಾಲದಲ್ಲಿ ಎಲ್ಲರನ್ನು ನಡುಗಿಸುತ್ತಿದ್ದ ಶಿವಸೇನೆ ಈಗ ಪ್ರಭಾವಿ ಸಚಿವ ಏಕನಾಥ್ ಶಿಂಧೆ ಹಾರಿಸಿದ ಬಂಡಾಯದ ಬಾವುಟಕ್ಕೆ ತತ್ತರಿಸಿ ಇಬ್ಭಾಗವಾಗುವತ್ತಾ ಸಾಗಿದೆ.

ಮುಖ್ಯಮಂತ್ರಿ ಕಾರ್ಯವೈಖರಿ ಮತ್ತು ಪುತ್ರ ಪ್ರೇಮದ ಬಗ್ಗೆ ತೀವ್ರ ಅತೃಪ್ತಿ ಹೊಂದಿರುವ ಶಿಂಧೆ ಮತ್ತು ಶಾಸಕರು ಈಗ ಸೂರತ್‌ನಿಂದ ಬಿಜೆಪಿ ಆಡಳಿತ ಇರುವ ಅಸ್ಸಾಂ ಗುವಹಾಟಿಗೆ ಶಿಫ್ಟ್‌ ಆಗಿದ್ದಾರೆ. ಅರ್ಧಕ್ಕೂ ಹೆಚ್ಚಿನ ಶಾಸಕರು ಶಿಂಧೆಯ ಜೊತೆ ಇರುವ ಕಾರಣ ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಿದೆ.

Uddhav Thackeray 2

ಸಂಖ್ಯಾ ಬಲ ಹೇಗಿದೆ?
288 ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕ ನಿಧನ ಆಗಿರುವ ಕಾರಣ, ಸದಸ್ಯ ಬಲ 287ಕ್ಕೆ ಕುಸಿದಿದೆ. ಹೀಗಾಗಿ ಬಹುಮತಕ್ಕೆ 144 ಸದಸ್ಯರ ಮತ ಬೇಕು. ಇಲ್ಲಿಯರೆಗೆ ಮಹಾ ವಿಕಾಸ್‌ ಅಘಾಡಿ(ಎಂವಿಎ) ಸರ್ಕಾರದ ಸಂಖ್ಯಾಬಲ 152(ಶಿವಸೇನೆ 55+ಎನ್‍ಸಿಪಿ 53+ಕಾಂಗ್ರೆಸ್ 44) ಹಾಗೂ ವಿಪಕ್ಷ ಬಿಜೆಪಿ ಕೊಟ 135 ಸದಸ್ಯ ಬಲ ಹೊಂದಿವೆ. ಇದನ್ನೂ ಓದಿ: ಬಾಳಾ ಠಾಕ್ರೆಯ ಹಿಂದುತ್ವ ಪಾಲಿಸುತ್ತೇವೆ: 40 ಶಾಸಕರ ಜೊತೆ ಸೂರತ್‌ನಿಂದ ಗುವಾಹಟಿಗೆ ಹಾರಿದ ಶಿಂಧೆ

ಸಾಧ್ಯತೆ 1
ಶಿಂಧೆ ನೇತೃತ್ವದ 33 ಶಾಸಕರು ವಿರುದ್ಧ ಮತ ಚಲಾಯಿಸಿದರೆ ಎಂವಿಎ ಸರ್ಕಾರಕ್ಕೆ 119 ಮತ ಮಾತ್ರ ಬಿದ್ದಂತಾಗುತ್ತದೆ. 144ರ ಮ್ಯಾಜಿಕ್‌ ಸಂಖ್ಯೆ ದಾಟದೇ ಅಲ್ಪ ಮತಕ್ಕೆ ಕುಸಿದು ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಪತನ ಹೊಂದುತ್ತದೆ. ಆದರೆ ಶಿಂಧೆ ಈಗಾಗಲೇ ನಮ್ಮ ಜೊತೆ 40 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.

Shiv Sena Rebel Eknath Shinde

ಸಾಧ್ಯತೆ 2
ಸರ್ಕಾರದ ವಿರುದ್ಧ ಮತ ಹಾಕಿದರೆ ಶಿಂಧೆ ಬಣದ 33 ಶಾಸಕರಿಗೆ ಅನರ್ಹತೆ ಭೀತಿ ಇರುತ್ತದೆ. ಈ ರೀತಿ ಆಗದೇ ಇರಲು ಅವರು ರಾಜೀನಾಮೆ ನೀಡಬಹುದು. ರಾಜೀನಾಮೆ ನೀಡಿದರೆ ಸದನದ ಬಲ 287ರಿಂದ 254ಕ್ಕೆ ಇಳಿಯುತ್ತದೆ. ಬಹುಮತಕ್ಕೆ 127 ಮತ ಬೇಕಾಗುತ್ತದೆ. ಹೀಗಾದಾಗ ಸರ್ಕಾರದ ಬಲ 119ಕ್ಕೆ ಕುಸಿಯುತ್ತದೆ. ಈ ಸನ್ನಿವೇಶ ಸೃಷ್ಟಿಯಾದಲ್ಲಿ 135 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಅಧಿಕಾರ ಸಿಗಲಿದೆ.

ಸಾಧ್ಯತೆ 3
ಶಿವಸೇನೆ ಶಾಸಕರು ರಾಜೀನಾಮೆ ನೀಡಿದರೆ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಆದರೆ ಶಿಂಧೆ ಮತ್ತು ಬಣ ಪಕ್ಷಾಂತರ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ 55 ಶಿವಸೇನೆ ಸದಸ್ಯರ ಪೈಕಿ 37 ಶಾಸಕರ ಬೆಂಬಲ ಬೇಕಾಗುತ್ತದೆ. ಈ ಕಾರಣಕ್ಕೆ ಉಳಿದ ಶಿವಸೇನೆ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ. 37 ಶಾಸಕರು ಪಕ್ಷ ತೊರೆದಲ್ಲಿ ಶಿವಸೇನೆ ಬಲ 18ಕ್ಕೆ ಕುಸಿಯಲಿದೆ. 37 ಶಾಸಕರು ಬೆಂಬಲ ನೀಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ರಾಜೀನಾಮೆ ನೀಡುವ ಅಗತ್ಯ ಬರುವುದಿಲ್ಲ. ಈ ಶಾಸಕರು ಸುಲಭವಾಗಿ ಬಿಜೆಪಿ ಸೇರಬಹುದು.

ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ಪಕ್ಷದ 3ನೇ ಎರಡು ಭಾಗದಷ್ಟು ಶಾಸಕರು ಪಕ್ಷ ತೊರೆದಲ್ಲಿ ಯಾವುದೇ ಕ್ರಮ ಆಗುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ಡೆಯಿಂದ ಸುಲಭವಾಗಿ ಪಾರಾಗಬಹುದು.

Live Tv

Share This Article
Leave a Comment

Leave a Reply

Your email address will not be published. Required fields are marked *