ಮುಂಬೈ: ಅನಾಥ ಮಕ್ಕಳಿಗಾಗಿ ಸಾಮಾನ್ಯ ವರ್ಗದ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ 1% ಮೀಸಲಾತಿಯನ್ನು ನೀಡಲು ಮಹಾರಾಷ್ಟ್ರ ಕ್ಯಾಬಿನೆಟ್ ನಿರ್ಧರಿಸಿದೆ.
ಅನಾಥ ಮಕ್ಕಳು ತಮ್ಮ ಜಾತಿಯನ್ನು ತಿಳಿಯದ ಕಾರಣ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಅವರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಈ ನಿರ್ಧಾರವು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೇ ಸಾಮಾನ್ಯ ವರ್ಗದಲ್ಲಿ 1%ರಷ್ಟು ಮೀಸಲಾತಿಯ ಸಹಾಯದಿಂದ ಅವರು ಉದ್ಯೋಗಗಳನ್ನು ಪಡೆಯಬಹುದು ಹಾಗೂ ಇತರ ಸೌಲಭ್ಯಗಳನ್ನು ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಂಕಜಾ ಮುಂಡೆ, ಅನಾಥ ಮಕ್ಕಳು ಅನಾಥಾಶ್ರಮದಿಂದ ಹೊರ ಹೋದಾಗ ಅವರು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವರ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಈ ಕ್ರಮ ಸಹಾಯವಾಗುತ್ತದೆ. ಅನಾಥ ಮಕ್ಕಳ ಜಾತಿ ತಿಳಿದಿಲ್ಲವಾದ್ದರಿಂದ ಅವರನ್ನು ಒಂದು ನಿರ್ದಿಷ್ಟ ವರ್ಗದಲ್ಲಿ ಸೇರಿಸಿಕೊಳ್ಳಲು ಆಗುವುದಿಲ್ಲ. ಇದರಿಂದ ಅವರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ರಿಯಾಯಿತಿಗಳನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ಮಹಾರಾಷ್ಟ್ರ ರಾಜ್ಯ ಹೊಸ ನೀತಿಗೆ ಸಹಿ ಹಾಕಿದ್ದು, ಸುಮಾರು 5,000 ಕೋಟಿ ರೂ. ಬಂಡವಾಳವನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಈ ನೂತನ ಯೋಜನೆಗೆ ಐದು ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಬರಗಾಲದ ಪೀಡಿತ ಮರಾಠವಾಡ ಪ್ರದೇಶದಲ್ಲಿ ನೀರಿನ ಗ್ರಿಡ್ಗಳನ್ನು ಸ್ಥಾಪಿಸಲು ಇಸ್ರೇಲ್ನ ರಾಷ್ಟ್ರೀಯ ಜಲ ಕಂಪೆನಿಯಾದ ಮೆಕೊರೊಟ್ನೊಂದಿಗಿನ ಒಕ್ಕೂಟವನ್ನು ಕ್ಯಾಬಿನೆಟ್ ಅನುಮೋದಿಸಿದೆ.