ಮುಂಬೈ: ಕಲ್ಲಿದ್ದಲು ಇಳಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಮೂವರು ಅಪ್ರಾಪ್ತ ಸಹೋದರಿಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ತಹಸಿಲ್ನಲ್ಲಿ ಕಲ್ಲಿದ್ದಲು ಇಳಿಸುತ್ತಿದ್ದಾಗ ಕಂಟೈನರ್ ಟ್ರಕ್ ವಾಲಿ ಸ್ಥಳದ ಬಳಿ ಮಲಗಿದ್ದ ಮೂವರು ಸಹೋದರಿಯರ ಮೇಲೆ ಬಿದ್ದಿದೆ. ಪರಿಣಾಮ ಮೂವರು ಸಹೋದರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಬಿಟ್ಟು ಪ್ರಿಯಕರನ ಜೊತೆ ಹೋಗಿದ್ದ ಮಹಿಳೆ ಅಸಹಜ ಸಾವು!
ಟೆಂಬಿವಿಲಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಇಟ್ಟಿಗೆ ಭಟ್ಟಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಬಾಲಕಿಯರ ಪೋಷಕರು ಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸಹೋದರಿಯರ ಜೊತೆಗೆ ಇದ್ದ ಎರಡು ವರ್ಷದ ಬಾಲಕಿ ಅಪಾಯದಿಂದ ಪಾರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಟ್ಟಿಗೆ ಗೂಡು ಮಾಲೀಕ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಭಿವಂಡಿ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.
ಮೃತ ಬಾಲಕಿಯರು ಮೂರರಿಂದ ಏಳು ವರ್ಷದೊಳಗಿನವರಾಗಿದ್ದು, ಇವರು ಕಾರ್ಮಿಕ ದಂಪತಿಯ ಪುತ್ರಿಯರು. ಪ್ರಸ್ತುತ ಬಂಧಿತರಲ್ಲಿ ಇಟ್ಟಿಗೆ ಭಟ್ಟಿಯ ಮಾಲೀಕ ಗೋಪಿನಾಥ್ ಮದ್ವಿ, ಕಲ್ಲಿದ್ದಲು ತಂದಿದ್ದ ಸುರೇಶ್ ರಾಮದಾಸ್ ಪಾಟೀಲ್ ಮತ್ತು ಟ್ರಕ್ ಚಾಲಕ ತೌಫಿಕ್ ಶೇಖ್ ಸೇರಿದ್ದಾರೆ ಎಂದು ತಿಳಿಸಿದರು.
ಬಂಧಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ(ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ನಂತರ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈಗ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್
ಘಟನೆ ವಿವರ: ಕಾರ್ಮಿಕ ದಂಪತಿಗೆ ಒಟ್ಟು ನಾಲ್ವರು ಹೆಣ್ಣು ಮಕ್ಕಳು. ದಂಪತಿ ಮಕ್ಕಳಿಗೆ ಮಲಗಿಕೊಳ್ಳಲು ಇಟ್ಟಿಗೆಗಳಲ್ಲಿ ಹುಲ್ಲಿನ ಗುಡಿಸಲನ್ನು ನಿರ್ಮಿಸಿದ್ದರು. ಅವರಿಬ್ಬರು ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದರು. ಆ ಗುಡಿಸಲಿನಲ್ಲಿ ಮೂವರು ಸಹೋದರಿಯರು ಮಲಗಿಕೊಂಡಿದ್ದು, 2 ವರ್ಷದ ಮಗುವನ್ನು ಮರಕ್ಕೆ ತೊಟ್ಟಿಲು ಕಟ್ಟಿ ಮಲಗಿಸಿದ್ದರು. ಎರಡು ವರ್ಷದ ಮಗು ಗುಡಿಸಲಿನಿಂದ ಸ್ವಲ್ಪ ದೂರದಲ್ಲಿದ್ದ ಕಾರಣ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಗುಡಿಸಲಿನಲ್ಲಿ ಮಲಗಿದ್ದ 3 ಸಹೋದರಿಯರ ಮೇಲೆ ಟ್ರಕ್ ಬಿದ್ದು ಮೃತಪಟ್ಟಿದ್ದಾರೆ.