ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಕೆಂಗಣ್ಣು ಕಾಯಿಲೆ ರೋಗದಿಂದ ಜನ ಸುಸ್ತಾಗಿ ಹೋಗಿದ್ದಾರೆ. ಕಣ್ಣಿನ ಆಸ್ಪತ್ರೆ (Eye Hospital) ಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಕರೆ ನೀಡಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು (Madras Eye) ಕಾಯಿಲೆ ಹೆಚ್ಚಾಗ್ತಿದೆ. ಮಂಗಳೂರು ನಗರ ಹೊರವಲಯದ ಬಜಪೆ, ಎಕ್ಕಾರು ಸೇರಿದಂತೆ ಬಂಟ್ವಾಳ, ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಹೆಚ್ಚಿನ ಜನರಲ್ಲಿ ಮದ್ರಾದ್ ಐ ಕಾಯಿಲೆ ಆವರಿಸಿದೆ. ಇಡೀ ಊರಿನಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡೋ ಜನ ಕಾಣಿಸ್ತಿದ್ದಾರೆ. ಭಾದಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಹೆಚ್ಚಿದ್ದು ಇವರ ಮೂಲಕ ಈ ವೈರಸ್ ಇತರರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ದಿನವೊಂದಕ್ಕೆ 100ಕ್ಕಿಂತ ಹೆಚ್ಚು ಜನ ಈ ಕೆಂಗಣ್ಣು ಕಾಯಿಲಿಗೆ ತುತ್ತಾಗುತ್ತಿದ್ದು ಕಣ್ಣಿನ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಇದನ್ನೂ ಓದಿ: ಶಿರಾಡಿ ಘಾಟ್ ರಸ್ತೆ ದುರಸ್ಥಿಗೆ ಮನವಿ- ಉದ್ಯಮಿಗಳಿಂದ ಸಂಸದ ವೀರೇಂದ್ರ ಹೆಗ್ಡೆಗೆ ಪತ್ರ
ಮದ್ರಾಸ್ ಐ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್ಗೆ ಕಾರಣ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲ್ಮೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಇದರ ಲಕ್ಷಣ. ಇದು ಸುಲಭವಾಗಿ ಹರಡುವ ಸೋಂಕು ರೋಗವಾಗಿದ್ದು ಇದು ಕಣ್ಣಿನ ಕಪ್ಪು ಗುಡ್ಡೆಗೆ ಹರಡಿದ್ರೆ ದೃಷ್ಟಿಗೆ ಸಂಚಕಾರವಾಗೋ ಸಾಧ್ಯತೆಯಿದೆ. ಹೀಗಾಗಿ ಕೆಂಗಣ್ಣು ರೋಗ ಪ್ರದೇಶದಲ್ಲಿ ಇರುವಾಗ ಕಣ್ಣನ್ನು ಮುಟ್ಟಿಕೊಳ್ಳದಿರುವುದು, ಆಗಾಗ ಕೈ ಸ್ವಚ್ಚಗೊಳಿಸುತ್ತಿರುವುದು, ವೈರಸ್ಗೆ ತುತ್ತಾದವರ ಸಂಪರ್ಕದಿಂದ ದೂರವಿರುವುದರಿಂದ ಅಪಾಯದಿಂದ ಪಾರಾಗಬಹುದು.
ಈ ರೋಗ ಭಾದೆಯಿಂದಾಗಿ ಬೆಳ್ತಂಗಡಿ (Belthangady) ಯ ಖಾಸಗಿ ಶಾಲೆಯೊಂದಕ್ಕೆ ರಜೆ ಘೋಷಿಸಲಾಗಿದೆ. ರೋಗಭಾದೆಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಶಾಲೆಗಳ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದೆ. ಒಟ್ಟಿನಲ್ಲಿ ಕೆಂಗಣ್ಣು ಕಾಯಿಲೆಯಿಂದ ಜೀವ ಹಾನಿ ಆಗದೇ ಇದ್ದರು ದೃಷ್ಟಿ ದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಇದನ್ನೂ ಓದಿ: ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ