ಮಡಿಕೇರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಸರ್ಕಾರ ಸಾಮೂಹಿಕ ಕಾರ್ಯಕ್ರಮಗಳನ್ನು ನಿಷೇಧಿಸಿದ್ದರೂ ಮಂಜಿನ ನಗರಿ ಮಡಿಕೇರಿ ಪಟ್ಟಣದ ಕಾವೇರಿ ಹಾಲ್ ಹಾಗೂ ಗೌಡ ಸಮಾಜದಲ್ಲಿ ಅದ್ಧೂರಿ ಮದುವೆಗಳು ನಡೆಯುತ್ತಿವೆ.
ಮದುವೆ, ಸಭೆ-ಸಮಾರಂಭಗಳಿಗೆ ನಿರ್ಬಂಧವಿದ್ದರೂ ಮಡಿಕೇರಿ ನಗರದಲ್ಲೇ ಎರಡೆರಡು ಮದುವೆಗಳು ನಡೆಯುತ್ತಿವೆ. ಕಾವೇರಿ ಹಾಲ್ನಲ್ಲಿ ಸುಮಾರು 1,500 ಹಾಗೂ ಗೌಡ ಸಮಾಜದಲ್ಲಿ 300ಕ್ಕೂ ಹೆಚ್ಚು ಮಂದಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಗೆ ಈಗಾಗಲೇ 65 ಜನರು ವಿದೇಶದಿಂದ ಮರಳಿದ್ದಾರೆ. ಶನಿವಾರದವರೆಗೂ ವಿದೇಶದಿಂದ ವಾಪಸ್ ಬಂದಿರುವವರು ಆರಾಮಾಗಿ ಓಡಾಡಿಕೊಂಡೇ ಇದ್ದರು.
ಇಷ್ಟೆಲ್ಲಾ ಆದರೂ ಅದ್ಧೂರಿ ಮದುವೆಗಳಿಗೆ ಕಡಿವಾಣ ಇಲ್ಲದಂತೆ ಆಗಿದೆ. ಸರ್ಕಾರದ ನಿಯಮಕ್ಕೂ ಕಿಮ್ಮತ್ತು ತೋರದ ಅಧಿಕಾರಿಗಳು ನಗರದಲ್ಲೇ ಮದುವೆ ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಮದುವೆ ಮನೆಯವರು ಮಾತನಾಡಿ ನಾವು ಈ ಕೊರೊನಾ ವೈರಸ್ ಬರುವ ಮೊದಲೇ ಮದುವೆ ಹಾಲ್ಗಳು ಬುಕ್ ಮಾಡಿದ್ದೆವು. ಈಗ ದಿಢೀರ್ ಆಗಿ ಕೊರೊನಾ ವೈರಸ್ ರಾಜುದಲ್ಲಿ ಹರಡುತ್ತಿರುವುದಕ್ಕೆ ಸಮಸ್ಯೆ ಆಗುತ್ತಿದೆ. ಆದರೂ ಕುಟುಂಬಸ್ಥರು ಮದುವೆಗೆ ಬಂದು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.