ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಕೊಡಗು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಿರುವಾಗ ಯಾರಾದ್ರೂ ನಿಯಮವನ್ನು ಮೀರಿ ಕರ್ನಾಟಕದ ಕೊಡಗಿಗೆ ಅಥವಾ ಕೊಡಗಿನಿಂದ ಕೇರಳಕ್ಕೆ ಎಂಟ್ರಿ ಕೊಟ್ಟರೆ ಯಾವುದೇ ಪರಿಶೀಲನೆಯನ್ನೂ ಮಾಡದೇ 14 ದಿನಗಳ ಕಾಲ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.
ಗಡಿ ದಾಟಿ ಬಂದವರು ವಿದೇಶದಿಂದ ವಾಪಸ್ ಆಗಿರುವ ಇತಿಹಾಸ ಇಲ್ಲದಿದ್ದರೂ ನೇರವಾಗಿ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ಕೇರಳದಿಂದ ಬಂದ ಇಬ್ಬರನ್ನು ಕೊಡಗಿನಲ್ಲಿರುವ ಕೋವಿಡ್ ಸೆಂಟರಿಗೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿದೇಶದಿಂದ ಬಂದು ಹೋಂ ಕ್ವಾರಂಟೈನ್ನಲ್ಲಿ ಇರುವವರು ನಿಯಮ ಮೀರಿ ಹೊರಗೆ ಓಡಾಡಿದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ. ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಹೀಗೆ ಶಿಕ್ಷೆಗೆ ಒಳಗಾದವರ ಪಾಸ್ಪೋರ್ಟ್ ಅಥವಾ ವೀಸಾಗಳಿಗೆ ಸಮಸ್ಯೆಯಾಗಲಿದ್ದು, ನಂತರ ಪುನಃ ನೀವು ವಿದೇಶಕ್ಕೆ ತೆರಳು ಸಮಸ್ಯೆಯಾಗುತ್ತೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಿದ್ದಾರೆ.