ಮಡಿಕೇರಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಶಂಕಿತ ವೃದ್ಧ ರೋಗಿಯೊಬ್ಬ ಎಸ್ಕೇಪ್ ಆಗಲು ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೇರಳದ ವಯನಾಡಿನ 70 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ಶಂಕೆಯ ಆಧಾರದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈ ವೃದ್ಧ ಆಸ್ಪತ್ರೆಯಿಂದ ಹೊರಬಂದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಒಂದು ಕ್ಷಣಕ್ಕೆ ದಿಗ್ಭ್ರಮೆಗೊಂಡಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ಪೊಲೀಸ್ ಸಹಾಯ ಪಡೆದು ವೃದ್ಧನನ್ನು ಹುಡುಕಾಡಿದ್ದಾರೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವೃದ್ಧ ಮಡಿಕೇರಿ ನಗರದ ಶಾಂತಿ ಚರ್ಚ್ ಬಳಿ ಹೋಗುತ್ತಿದ್ದ ಎನ್ನಲಾಗಿದೆ. ಅಲ್ಲಿಗೆ ಹುಡುಕಿಕೊಂಡು ಹೋದ ನರ್ಸ್ ಹಾಗೂ ಸ್ವಚ್ಛತಾ ಸಿಬ್ಬಂದಿ ಆತನನ್ನು ಕರೆತಂದಿದ್ದಾರೆ. ಬಳಿಕ ಸಾರ್ವಜನಿಕ ಜೀಪ್ ಒಂದರ ಮೂಲಕ ಆಸ್ಪತ್ರೆಗೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.