ದಾವಣಗೆರೆ: ಮಂಗಳೂರಿನಲ್ಲಿ ನಡೆದಂತಹ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ. ಇದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೋಸ್ಕರ ಕೊಲೆ ಮಾಡುತ್ತಿರುವುದು ತಪ್ಪು, ಅದು ದುರ್ದೈವ. ಮಂಗಳೂರಿನಲ್ಲಿ ನಡೆದಂತ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ. ಅದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು. ಇದನ್ನು ಉಲ್ಬಣ ಆಗಲು ಬಿಡಬಾರದು ಎಂದರು.
ಮಂಗಳೂರಿನಲ್ಲಿ ನಡೆದ ಘಟನೆ ಸರ್ಕಾರ ಸಹಿಸುವುದಿಲ್ಲ. ಪರಿಸ್ಥಿತಿ ತಿಳಿ ಮಾಡಲಿಲ್ಲ ಅಂದರೆ ತಪಾತ್ರೆಯ ಕಟ್ಟಿಟ್ಟ ಬುತ್ತಿ, ಹತ್ಯೆ ಮಾಡುವ ಹಂತಕ್ಕೆ ಯಾರು ಹೋಗಬಾರದು. ಆದರೆ ಪ್ರವೀಣ್ ಹತ್ಯೆ ಮಾಡಿದವರು, ಅವರ ಅಂಗಡಿಯಲ್ಲೇ ಕೆಲಸ ಮಾಡುವವರೆಂದು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಫ್ಐ ಸಂಘಟನೆ ನಿಷೇಧ: ಮಂಗಳೂರಿನಲ್ಲಿ ನಡೆದ ಹತ್ಯೆ ಬಗ್ಗೆ ಪಿಎಫ್ಐ ಕೈವಾಡ ಇದೆ ಎನ್ನುವುದರ ಬಗ್ಗೆ ಆಧಾರ ಇಲ್ಲದೆ ಮಾತನಾಡಲು ಬರುವುದಿಲ್ಲ. ಅವರು ಈ ಹತ್ಯೆಗಳ ಹಿಂದಿದ್ದರೆ ಅನುಭವಿಸುತ್ತಾರೆ. ಪಿಎಫ್ಐ ಅವರ ಬಗ್ಗೆ ಬಿಜೆಪಿ, ಕಾಂಗ್ರೆಸ್ನವರ ಬಳಿ ದಾಕ್ಷಿಣ್ಯ ಇಲ್ಲ. ಪಿಎಫ್ಐ ವಿರುದ್ಧ ತನಿಖೆ ಮಾಡಲು ಆಧಾರ ಸಾಕ್ಷಿಗಳು ಬೇಕಾಗುತ್ತದೆ ಎಂದು ಹೇಳಿದರು.
ಏಕಾಏಕಿ ಮತ್ತೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಬರುವುದಿಲ್ಲ. ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಒಂದು ಹಂತಕ್ಕೆ ತಂದೇ ತರುತ್ತೇವೆ. ಯಾರು ಹುಡುಗಾಟ ಆಡಲು ಬರುವುದಿಲ್ಲ, ಮಂಗಳೂರಲ್ಲಿ ನಡೆದಿರುವ ಹತ್ಯೆಗಳು ನಿರೀಕ್ಷೆ ಮಾಡಿದ್ದಲ್ಲ. ಸರ್ಕಾರದ ವಿರುದ್ಧ ಕಾರ್ಯಕರ್ತರು ಮುನಿಸುಕೊಳ್ಳಬಾರದು. ಇದಕ್ಕೆ ಕಾರಣೀಕರ್ತರನ್ನು ಹುಡುಕಿ ತಾಕೀತು ಮಾಡಿ ಶಿಕ್ಷೆಗೊಳಪಡಿಸುತ್ತೇವೆ ಎಂದು ಮನವಿ ಮಾಡಿದರು.
ಪ್ರವೀಣ್, ಫಾಝಿಲ್ ಹತ್ಯೆ ವಿಚಾರ: ಪ್ರವೀಣ್ ನೆಟ್ಟಾರು ಹಾಗು ಫಾಝಿಲ್ ಹತ್ಯೆಗೆ ಲಿಂಕ್ ಆಗಿರುವುದು ತಪ್ಪು. ಕೆಲವರು ಮಾತನಾಡುತ್ತಿರುವುದು ಕೂಡ ತಪ್ಪು. ವಿರೋಧ ಪಕ್ಷದವರು ಪ್ರವೀಣ್ ಹಾಗೂ ಫಾಝಿಲ್ ಕೊಲೆಗೆ ಲಿಂಕ್ ಮಾಡ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿರುವ ವಿಚಾರ ಎಂದರು. ಇದನ್ನೂ ಓದಿ: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್ಒ
ಇನ್ನು ಫಾಝಿಲ್ ಹತ್ಯೆಯಾದಾಗ ಸಿಎಂ ಆಗಲಿ ಸಚಿವರಾಗಲಿ ಮನೆಯ ಹತ್ತಿರ ಹೋಗದೆ ಇರಲು ಕಾರಣ ಇದೆ. ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದ ಬಳಿಕ ಸಿಎಂ ಬೊಮ್ಮಾಯಿ ಅವರು ಫಾಝಿಲ್ ಕೊಲೆಯಾದಾಗ ಅವರು ಏರ್ ಕ್ರಾಪ್ಟ್ನಲ್ಲಿದ್ದರು. ಅಲ್ಲಿಂದ ಅವರು ಬೆಂಗಳೂರು ಕಡೆಗೆ ತಮ್ಮ ಪ್ರಯಾಣ ಬೆಳೆಸಿದ್ದರು. ಆದ್ದರಿಂದ ಅವರು ಫಾಝಿಲ್ ಮನೆಗೆ ಹೋಗಲು ಆಗಲಿಲ್ಲ ಎಂದು ಸಮರ್ಥಿಕೊಂಡರು.
ಉತ್ತರ ಪ್ರದೇಶ ಮಾದರಿ ಅಳವಡಿಸಲು ಚಿಂತನೆ ಇಲ್ಲ: ರಾಜ್ಯದಲ್ಲಿ ಯುಪಿ ಮಾದರಿ ತರಲು ಮಾಧ್ಯಮದವರು ಒತ್ತಾಯಿಸಿದ್ದಕ್ಕಾಗಿ ಸಿಎಂ ಬೊಮ್ಮಾಯಿರವರು ಯುಪಿನೇ ಬೇರೆ, ಕರ್ನಾಟಕ ರಾಜ್ಯನೇ ಬೇರೆ. ಅಲ್ಲಿನ ಸಮಸ್ಯೆಗೂ ಇಲ್ಲಿ ಸಮಸ್ಯೆಗೂ ವ್ಯತ್ಯಾಸ ಇದೆ ಎಂದು ಈಗಾಗಲೇ ತಿಳಿಸಿದ್ದಾರೆ. ಆದರೆ ಮಾಧ್ಯಮದವರು ಕೆಲ ದಿನಗಳ ಹಿಂದೆ ಒತ್ತಿ ಒತ್ತಿ ಕೇಳಿದಕ್ಕಾಗಿ ಸಿಎಂ ಬೊಮ್ಮಾಯಿರವರು ಕರ್ನಾಟಕದಲ್ಲೂ ಯುಪಿ ಮಾದರಿ ಆಗಬಹುದು ಎಂದಿದ್ದರು, ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ
ಯಡಿಯೂರಪ್ಪನವರೇ ನಮ್ಮ ಲೀಡರ್: ಯಡಿಯೂರಪ್ಪನವರೇ ನಮ್ಮ ಲೀಡರ್. ಅದರಲ್ಲಿ ಎರಡು ಮಾತಿಲ್ಲ, ಅವರನ್ನು ಮೂಲೆ ಗುಂಪು ಮಾಡಬೇಕೆಂಬುದು ಇಡೀ ಬಿಜೆಪಿಯಲ್ಲಿ ಯಾರೊಬ್ಬರ ತಲೆಯಲ್ಲಿಲ್ಲ, ಒಂದು ಪಕ್ಷ ಅಂದರೆ ಕಾರ್ಯಕರ್ತರು ಸಂಘಟನೆ ಮಾಡಿಕೊಂಡು ಪ್ರವಾಸ ಮಾಡಬೇಕಾಗುತ್ತದೆ. ಯಡಿಯೂರಪ್ಪನವರು ಒಬ್ಬರೇ ಮಾಡಲು ಆಗುತ್ತಾ ಆಗಲ್ಲ, ಇನ್ನು ಬೇರೆ ಬೇರೆ ಘಟನೆ ಜರುಗಿದ್ದರಿಂದ ವಿಜಯೋತ್ಸವವನ್ನು ರದ್ದು ಮಾಡಿದ್ದೇವೆ. ಆದರೆ ಯಡಿಯೂರಪ್ಪನವರನ್ನು ಸಂಘಟನೆ ಮಾಡುವ ವಿಚಾರದಲ್ಲಿ ಯಾರು ತಡಿಯಲ್ಲ, ಯಾರು ತಡಿಯಲು ಆಗುವುದಿಲ್ಲ ಎಂದು ತಿಳಿಸಿದರು.
ರನ್ನಿಂಗ್ ರೇಸ್ನಲ್ಲಿ ಗೆಲಲ್ಲುತ್ತೇವೆ ಎಂದು ಓಡ್ತಾರೆ, ಓಡ್ಲಿ ಬಿಡಿ ಜನ ಅಲ್ವಾ ತೀರ್ಮಾನ ಮಾಡೋದು ಎಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ವ್ಯಂಗ್ಯ ಮಾಡಿದರು. ಇನ್ನು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ರೇ ರಾಜ್ಯದಲ್ಲಿ ಗೆದ್ದು ಬಿಡ್ತಾರ ಎಂದು ಪ್ರಶ್ನಿಸಿದರು.