ಮಂಡ್ಯ: ಪತಿ ಮಾಡಿರುವ ಸಾಲಕ್ಕೆ ಜೀತವಿರಲು ಒಪ್ಪದ ಮಹಿಳೆಯೊಬ್ಬರನ್ನು ಬಲವಂತವಾಗಿ ಮಾಲೀಕರು ಕಾರಿನಲ್ಲಿ ಹೊತ್ತೊಯ್ದ ಘಟನೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ತಮಿಳುನಾಡು ಮೂಲದ ಜಾನಕಮ್ಮ (27) ಮಾಲೀಕರ ದೌರ್ಜನ್ಯಕ್ಕೆ ತುತ್ತಾದ ಮಹಿಳೆ. ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕನಾಗಿರುವ ಕುದರಗುಂಡಿ ಗ್ರಾಮದ ನಿವಾಸಿ ನಾಗೇಶ್ ಮಹಿಳೆಯನ್ನು ಬಲವಂತವಾಗಿ ಹೊತ್ತೊಯ್ದಿದ್ದಾನೆ.
ನಡೆದದ್ದು ಏನು?
ತಮಿಳುನಾಡು ಮೂಲದ ಜಾನಕಮ್ಮ ಹಾಗೂ ಪತಿ ಚಿನ್ನತಂಬಿ ಅವರು ಕೆಲಸಕ್ಕಾಗಿ ಮಂಡ್ಯ ಜಿಲ್ಲೆಗೆ ಬಂದಿದ್ದರು. ಈ ದಂಪತಿ ಹಲವು ವರ್ಷಗಳಿಂದ ಕುದರಗುಂಡಿ ಗ್ರಾಮದ ನಾಗೇಶ್ ಮನೆ ಮತ್ತು ತೋಟದಲ್ಲಿ ಜೀತವಿದ್ದು, ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ಗಂಡ ಚಿನ್ನತಂಬಿ ಮೃತಪಟ್ಟಿದ್ದಾರೆ.
ಇತ್ತ ಚಿನ್ನತಂಬಿ ನಾಗೇಶ್ ಬಳಿ 30 ಸಾವಿರ ರೂ. ಸಾಲ ಪಡೆದಿದ್ದರಂತೆ. ಸಾಲದ ಹಣವನ್ನು ತೀರಿಸಲಾಗದೇ ಜಾನಕಮ್ಮ 9 ತಿಂಗಳ ಹಿಂದೆ ಬೆಕ್ಕಳಲೆಗೆ ಬಂದು ನೆಲೆಸಿದ್ದರು. ಜಾನಮಕ್ಕ ಬೆಕ್ಕಳಲೆಯಲ್ಲಿ ವಾಸವಾಗಿದ್ದಾರೆ ಎಂದು ಅರಿತ ನಾಗೇಶ್ ಆತನ ಸಹಚರರಾದ ಕರಿಯಪ್ಪ ಹಾಗೂ ಪಾಂಡು ಕೆಎ 11, ಎಂ-2598 ಕೆಂಪು ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ನಾನು ಬರುವುದಿಲ್ಲ, ಬಿಟ್ಟು ಬಿಡಿ ಅಂತ ಎಷ್ಟೇ ಹಠ ಮಾಡಿದರೂ, ನಾಗೇಶ್ ಜಾನಕಮ್ಮನನ್ನು ಕಾರಿನಲ್ಲಿ ಹೊತ್ತೊಯ್ದಿದ್ದಾರೆ.
ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ನೋಡಿದ್ದ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ಮದ್ದೂರು ಘಟಕದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಕುದರಗುಂಡಿ ಗ್ರಾಮಕ್ಕೆ ಬಂದ ಪೊಲೀಸರು ಜಾನಕಮ್ಮ ಅವರನ್ನು ರಕ್ಷಿಸಿ, ನಾಗೇಶ್ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv